ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಫೆ.8ರಂದು ಇಂಧನ ಖಾಲಿಯಾಗಿ ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ರೆಡ್ ಬರ್ಡ್‌ ಕಂಪನಿಯ ವಿಮಾನ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಿದ್ದಿತ್ತು. ನಾಲ್ಕು ದಿನಗಳಾದರೂ ವಿಮಾನದ ಅವಶೇಷಗಳನ್ನು ತೆಗೆಯಲಾಗಿಲ್ಲ. ಹೀಗಾಗಿ, ಗದ್ದೆಯಲ್ಲಿ ಬೆಳೆದಿರುವ ಕಬ್ಬಿನ ಬೆಳೆ ಹಾಳಾಗಿದ್ದು, 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜಮೀನಿನ ಮಾಲೀಕ ನಿಂಗಪ್ಪ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ನಿಂಗಪ್ಪ, ವಿಮಾನ ಪತನಗೊಂಡು ನಾಲ್ಕು ದಿನ ಕಳೆದರೂ ಜಮೀನಿನಿಂದ ವಿಮಾನದ ಅವಶೇಷಗಳನ್ನು ತೆಗೆದಿಲ್ಲ. ಆಯಿಲ್ ಕೂಡ ಸೋರಿಕೆಯಾಗಿದೆ. ಇದೇ ವೇಳೆ, ಈ ದುರಂತ ನೋಡಲು ಬಂದ ನೂರಾರು ಜನರು, ಜಮೀನಿನಲ್ಲಿದ್ದ ಕಬ್ಬನ್ನು ತುಳಿದು ಹಾಳುಗೆಡವಿದ್ದಾರೆ. ಒಟ್ಟು 5 ಎಕರೆ ಜಮೀನು ವಿಮಾನ ದುರಂತದಿಂದ ನಾಶವಾಗಿದೆ. ಈಗ ಜಮೀನನ್ನು ಸಂಪೂರ್ಣ ಶುಚಿಗೊಳಿಸಿ, ಮತ್ತೆ ಬೆಳೆ ಬೆಳೆಯಬೇಕು. ಇದರಿಂದ ಅಂದಾಜು 5 ಲಕ್ಷ ರೂ.ಖರ್ಚಾಗುತ್ತೆ. ಇದಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.