ಮಂಗಳೂರು: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್‌ ಸಮೀಪದ ಎಡಕುಮೇರಿ-ಸಿರಿಬಾಗಿಲು ನಡುವೆ ರೈಲು ಮಾರ್ಗಕ್ಕೆ ಶನಿವಾರ ರಾತ್ರಿ ಮಣ್ಣು ಕುಸಿದಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಣ್ಣು ತೆರವು ಕಾರ್ಯ ಭರದಂದ ಸಾಗಿದೆ.

ಶನಿವಾರ ರಾತ್ರಿ ರೈಲು ಮಾರ್ಗಕ್ಕೆ ಮೇಲ್ಭಾಗದಿಂದ ಮಣ್ಣು ಕುಸಿತಗೊಂಡಿದೆ. ಈ ವೇಳೆ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್‌- ವಿಜಯಪುರ ಎಕ್ಸ್‌ಪ್ರೆಸ್‌ ಘಟನಾ ಸ್ಥಳದಲ್ಲಿ ನಿಲ್ಲಿಸಲಾಯಿತು. ಮುರುಡೇಶ್ವರದಿಂದ ಪ್ರಾರಂಭವಾದ ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳುರು ಎಕ್ಸ್‌ಪ್ರೆಸ್‌ ನ್ನು ರಾತ್ರಿ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ರೈಲುಸಂಖ್ಯೆ 16512 ಕೋಝಿಕ್ಕೋಡ್‌-ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರಾತ್ರಿ ಸಿರಿಬಾಗಿಲು ತಲುಪಿದೆ. ರೈಲು ಸಂಖ್ಯೆ 16596 ಕಾರವಾರ-ಕೆಎಸ್‌ಆರ್‌ ಬೆಂಗಳೂರಿಗೆ ರಾತ್ರಿ ಬಾರ್ಕೂರಿನಿಂದ ಹೊರಟರು ಸಂಚಾರ ವ್ಯತ್ಯಯವಾಯಿತು. ರೈಲುಸಂಖ್ಯೆ 16595 ಕೆಎಸ್‌ಆರ್‌ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.

ಪರಿಹಾರ ಕಾರ್ಯಾಚರಣೆ: ಶನಿವಾರ ರಾತ್ರಿ ಪರಿಹಾರ ಸಾಮಾಗ್ರಿ ರೈಲು ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಿಂದ ಹೊರಟು ಸಿರಿಬಾಗಿಲು ನಿಲ್ದಾಣಕ್ಕೆ ತಲುಪಿ ರಾತ್ರಿಯೇ ಪರಿಹಾರ ದುರಸ್ತಿ ಕಾರ್ಯಾಚರಣೆ ಸ್ಥಳಕ್ಕೆ ತೆರಳಿ ಕೆಲಸ ಆರಂಭಿಸಲಾಯಿತು. ರೈಲು ಮಾರ್ಗದ ಮಣ್ಣು ತೆರವು ನಡೆಸಲು ಆರಂಭಿಸಲಾಯಿತು. ಪ್ರಯಾಣಿಕರ ಅನುಕೂಲ್ಕಕಾಗಿ ಹಾಸನ, ಸುಬ್ರಹ್ಮಣ್ಯ ರೋಡ್‌ ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಿಜಯಪುರ ಎಕ್ಸ್‌ಪ್ರೆಸ್‌ ಪ್ರಯಾಣಿಕರಿಗೆ ಉಪಹಾರಗಳನ್ನು ಸರಬರಾಜು ಮಾಡಲಾಯಿತು. ಶನಿವಾರದ ರೈಲು ಸಂಖ್ಯೆ 16596 ಕಾರವಾರ-ಕೆಎಸ್‌ಆರ್‌ ಬೆಂಗಳೂರು ಸಂಚಾರ ಆರಂಭಿಸಿದ್ದು ಅದನ್ನು ಮಂಗಳೂರು ಜಂಕ್ಷನ್‌, ಶೊರನೂರು ಜಂಕ್ಷನ್‌, ಪಾಲಕ್ಕಾಡ್‌ ಜಂಕ್ಷನ್‌, ಇರೊಡೆ ಜಂಕ್ಷನ್‌ ಮೂಲಕ ಕೆಎಸ್‌ಆರ್‌ ಬೆಂಗಳೂರಿಗೆ ಮಾರ್ಗ ಬದಲಿಸಲಾಯಿತು. ರೈಲುಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಹಾಸನ ತಲುಪಿದ್ದು, ಹಾಸನ-ಮುರುಡೇಶ್ವರ ಪ್ರಯಾಣ ಭಾಗಶಃ ರದ್ದು ಮಾಡಲಾಯಿತು.ರೈಲುಸಂಖ್ಯೆ 16511 ಕೆಎಸ್‌ಆರ್‌ ಬೆಂಗಳೂರು-ಕೋಝಿಕೋ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ಹಾಸನದಲ್ಲಿ ಅಲ್ಪಾವಧಿಗೆ ಸಂಚಾರ ಕೊನೆಗೊಂಡಿತು. ಹಾಸನ-ಕೋಝಿಕ್ಕೋಡ್ ನಡುವೆ ಭಾಗಶಃ ಸಂಚಾರ ರದ್ದಾಗಿದೆ. ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಸಂಚಾರ ಹಾಸನದಲ್ಲಿ ಮುಕ್ತಾಯಗೊಂಡಿದೆ. ಹಾಸನ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಭಾಗಶಃ ರದ್ದಾಗಿದೆ. ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು - ಕಾರವಾರ ಎಕ್ಸ್‌ಪ್ರೆಸ್ ಸಕಲೇಶಪುರದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ. ಸಕಲೇಶಪುರದಿಂದ ಕಾರವಾರ ನಡುವೆ ಭಾಗಶಃ ರದ್ದಾಗಿದೆ. ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ. ಸುಬ್ರಹ್ಮಣ್ಯ -ಎಂಎಂವಿಟಿ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಿದೆ.ಕೋಝಿಕ್ಕೋಡ್ ನಿಂದ ಹೊರಟ ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಪ್ರಯಾಣವು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಬದಲಿಗೆ ಕಬಕ ಪುತ್ತೂರಿನಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ ಮತ್ತು ಕಬಕ ಪುತ್ತೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಮಂಗಳೂರು ಸೆಂಟ್ರನ್‌ನಿಂದ ಆರಂಭವಾದ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ. ಸುಬ್ರಹ್ಮಣ್ಯ-ವಿಜಯಪುರ ನಡುವೆ ಭಾಗಶಃ ರದ್ದಾಗಿದೆ.ಭಾನುವಾರದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್‌ಪ್ರೆಸ್ ಪ್ರಯಾಣ, ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಪ್ರಯಾಣ ರದ್ದುಗೊಳಿಸಲಾಯಿತು. ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್‌ನ್ನು ಬದಲಿ ಮಾರ್ಗವಾಗಿ ಎಸ್‌ಎಸ್‌ಎಸ್‌ ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು ಮೂಲಕ ಮಂಗಳೂರು ಜಂಕ್ಷನ್‌ಗೆ ಸಂಚಾರಕ್ಕೆ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್‌ನ್ನು ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್‌ಎಸ್‌ಎಸ್ ಹುಬ್ಬಳ್ಳಿ ಮೂಲಕ ಸಂಚಾರಕ್ಕೆ, ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ನ್ನು ಬದಲಿ ಮಾರ್ಗವಾಗಿ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್‌ಪೆಟ್ಟೈ - ಎಸ್‌ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ, ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ್ನು ಬದಲಿ ಮಾರ್ಗವಾಗಿ ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಎಸ್‌ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ, ರೈಲು ಸಂಖ್ಯೆ. 16511 ಕೆಎಸ್‌ಆರ್‌ ಬೆಂಗಳೂರು - ಕೋಝಿಕೋಡ್ ಎಕ್ಸ್‌ಪ್ರೆಸ್‌ನ್ನು ಬೆಂಗಳೂರು ಎಸ್‌ಎಂವಿಬಿನಲ್ಲಿ ಪ್ರಯಾಣ ಆರಂಭಿಸಿ ಎಸ್‌ಎಂವಿಟಿ ಬೆಂಗಳೂರು ಜೋಲಾರ್‌ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್‌ಗೆ ಸಂಚಾರಕ್ಕೆ, ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್‌ನ್ನು ಎಸ್‌ಎಂವಿಟಿ ಬೆಂಗಳೂರು - ಓಮಲೂರು ಜಂಕ್ಷನ್ - ಪೋದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕಣ್ಣೂರು - ತೋಕೂರು - ಮುರ್ಡೇಶ್ವರಕ್ಕೆ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ಪರೀಕ್ಷೆ ಅಭ್ಯರ್ಥಿಗಳಿಗೆ ತೊಂದರೆ ?: ರೈಲು ಮಾರ್ಗಕ್ಕೆ ಮಣ್ಣು ಕುಸಿತದಿಂದ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಭಾನುವಾರ ನಡೆದ ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ತೊಂದರೆ ಆಗಿದೆ ಎಂಬ ಅಳಲು ಕೇಳಿಬಂದಿದೆ. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್‌ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಮಾನವೀಯ ನೆಲೆಯಲ್ಲಿ ರೈಲು ರದ್ದತಿಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ವೈರಲ್‌ ಆಗಿದೆ.