ಸಾರಾಂಶ
ಓದುಗರು ಲಂಕೇಶ್ ಪತ್ರಿಕೆ ಪ್ರತಿವಾರ ಮಾರುಕಟ್ಟೆಗೆ ಬರುವುದ ಜಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಿದ್ದರು. ಅಷ್ಟರ ಮಟ್ಟಿಗೆ ಪತ್ರಿಕೆ ಪ್ರಭಾವ ಬೀರಿತ್ತು.
ಚಿತ್ರದುರ್ಗ: ಹೆಚ್ಚು ಓದು ಹಾಗೂ ಅಧ್ಯಯನ ಮಾಡಿದರೆ ಪತ್ರಕರ್ತರು ವರದಿಗಾರಿಕೆಗೆ ಜೀವ ತುಂಬಲು ಸಾಧ್ಯವೆಂಬ ಹಾದಿಯ ಲಂಕೇಶ್ ನಿಚ್ಚಳವಾಗಿಸಿದ್ದರೆಂದು ಚಿಂತಕ ಜೆ.ಯಾದವರೆಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ`ಮತ್ತೆ ಮತ್ತೆ ಲಂಕೇಶ್ ಮೇಷ್ಟ್ರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓದುಗರು ಲಂಕೇಶ್ ಪತ್ರಿಕೆ ಪ್ರತಿವಾರ ಮಾರುಕಟ್ಟೆಗೆ ಬರುವುದ ಜಾತಕ ಪಕ್ಷಿಗಳಂತೆ ಕಾದು ಕುಳಿತಿರುತ್ತಿದ್ದರು. ಅಷ್ಟರ ಮಟ್ಟಿಗೆ ಪತ್ರಿಕೆ ಪ್ರಭಾವ ಬೀರಿತ್ತು. ಜಾಹಿರಾತು ಇಲ್ಲದೇ ಪತ್ರಿಕೆ ನಡೆಸಿದ ಹೆಗ್ಗಳಿಕೆ ಅವರದು. ಕೊನೆಯವರೆಗೂ ಬರವಣಿಗೆ ನಿಲ್ಲಿಸಲಿಲ್ಲ. ಎಲ್ಲ ಸಿದ್ಧಾಂತ ಮೀರಿದ, ಅಪ್ಪಟ ಜೀವನ ಪ್ರೀತಿಯನ್ನು ಲಂಕೇಶ್ ಹೊಂದಿದ್ದರೆದರು.ಕತೆಗಾರ ಜಡೆಕುಂಟೆ ಮಂಜುನಾಥ್ ಮಾತನಾಡಿ, ಲಂಕೇಶ್ ತಮ್ಮ ಬರವಣಿಗೆ ಮೂಲಕ ಒಂದು ತಲೆಮಾರಿನ ವೈಚಾರಿಕವಾಗಿ ಎಚ್ಚರಿಸಿದವರು. ಪ್ರಗತಿಪರವಾಗಿ ಆಲೋಚಿಸಿಸುವ ಬಹುದೊಡ್ಡ ಸಾಹಿತ್ಯ ವಲಯವನ್ನೇ ಸೃಷ್ಟಿಸಿದರು. ಪತ್ರಕರ್ತರಾಗಿ ನೇರ, ನಿಷ್ಟುರ ನಡೆಯಿಂದ ಸರ್ಕಾರಗಳಿಗೂ ಎಚ್ಚರಿಕೆಯಾಗಿದ್ದರು ಎಂದರು.
ಉಪನ್ಯಾಸಕ ಡಾ.ಗುರುನಾಥ್ ಮಾತನಾಡಿ, ಲಂಕೇಶ್ ಅವರು ಇಡೀ ಕರ್ನಾಟಕದ ಮೇಷ್ಟ್ರು ಆಗಿದ್ದರು. ಹುಟ್ಟುಹಬ್ಬದ ನೆಪದಲ್ಲಿ ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾದುದು. ಲಂಕೇಶರು ತಮ್ಮ ಸಾಹಿತ್ಯ ಕೃಷಿ, ಪತ್ರಿಕಾ ಕೃಷಿಯ ಮೂಲಕ ತಮಗೇ ಅರಿವಿಲ್ಲದೇ ನಾಡಿನಾದ್ಯಂತ ಆ ತಲೆಮಾರಿನ ಬರಹಗಾರರನ್ನು ಬೆಳೆಸಿದರು. ಧರ್ಮ, ರಾಜಕಾರಣ, ಜಾತಿ ಕುರಿತ ಅವರ ಗ್ರಹಿಕೆಗಳು ಅಪರೂಪದ ಒಳನೋಟ ಹೊಂದಿದ್ದವು ಎಂದರು.ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಲಂಕೇಶ್ ಅವರು ಒಂದು ವಿಶ್ವ ವಿದ್ಯಾಲಯವಾಗಿದ್ದವರು. ಅವರ ಬಹುತೇಕ ಕೃತಿಗಳನ್ನು ಬೋಧಿಸಿದ ಹೆಗ್ಗಳಿಕೆ ನನಗಿದೆ. ಬೌದ್ಧಿಕ ಚಿಂತನೆಗಳ ಹೊಂದಿರುವ ಒಂದು ಪರಂಪರೆ ಬಿಟ್ಟು ಹೋಗಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಲಂಕೇಶರ ಹುಟ್ಟುಹಬ್ಬದ ದಿನ ಅವರ ಚಿಂತನೆಗಳನ್ನು ನೆನಪು ಮಾಡಿಕೊಳ್ಳಲು ಕಾರ್ಯಕ್ರಮ ಸಹಕಾರಿಯಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.ಹಿರಿಯ ಪತ್ರಕರ್ತರಾದ ಎಂ.ಎನ್.ಅಹೋಬಲಪತಿ, ಕನ್ನಡ ಸಂಪಿಗೆ ತಿಪ್ಪೇಸ್ವಾಮಿ, ಗೌನಹಳ್ಳಿ ಗೋವಿಂದಪ್ಪ, ಮಲ್ಲಾಪುರ ಹರೀಶ್ ಇದ್ದರು.