ಸಾರಾಂಶ
ಸಂಸದ ಬಿ.ವೈ.ರಾಘವೇಂದ್ರ ಭಾಗಿ । ವಿನೋಬನಗರದ ಶಿವಾಲಯದಲ್ಲಿನ ಧರ್ಮಸಭೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಭಾರತ್ ಅಕ್ಕಿ ಯೋಜನೆ’ಗೆ ಬುಧವಾರ ವಿನೋಬನಗರದ ಶಿವಾಲಯದಲ್ಲಿ ನಡೆಯುತ್ತಿರುವ ಧರ್ಮಸಭೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಅಕ್ಕಿ ವಿತರಿಸುವ ಮೂಲಕ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವಾತ್ಪಾದರು ಚಾಲನೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆ ಇದು. ಬಡ ಮತ್ತು ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಕೇವಲ 290 ರು.ಗಳಿಗೆ ನೀಡಲಾಗುತ್ತದೆ. ಒಂದು ಕೆಜಿ ಅಕ್ಕಿಗೆ 29 ರು. ಇದೆ. ಇದೇ ಅಕ್ಕಿ ಮಾರುಕಟ್ಟೆಯಲ್ಲಿ 60 ರು.ಗೆ ಮಾರಾಟವಾಗುತ್ತದೆ. ಬಡವರಿಗೆ ಅನುಕೂಲವಾಗಲು ಪ್ರಧಾನ ಮಂತ್ರಿಯವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ತಿಳಿಸಿದರು.ಶಿವಮೊಗ್ಗಕ್ಕೆ ಪ್ರತಿದಿನ 10 ಲೋಡ್ ಅಕ್ಕಿ ಬರುತ್ತದೆ. ಪ್ರತಿ ಲೋಡ್ ನಲ್ಲಿ 10 ಕೆಜಿಗಳ 2500 ಬ್ಯಾಗ್ ಗಳಿರುತ್ತವೆ. ತಮ್ಮ ಮೊಬೈಲ್ ನಂಬರ್ ನೀಡಿ ಅಕ್ಕಿಯನ್ನು ಸಾರ್ವಜನಿಕರು ಖರೀದಿಸಬಹುದು. ಇದಕ್ಕೆ ಯಾವುದೇ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದರು.
ಗರೀಬಿ ಹಠಾವೋ ಎಂಬುದು ಮುಗಿದ ಕತೆ. ಈಗ ಗರೀಬ್ ಕಲ್ಯಾಣ ಯೋಜನೆಯಡಿ ಅಕ್ಕಿ ನೀಡಲಾಗುತ್ತದೆ. ಯಾವುದನ್ನೂ ಉಚಿತವಾಗಿ ಕೊಡಬಾರದು ಎಂಬುದು ಮೋದಿಯವರ ಉದ್ದೇಶವಾಗಿದೆ. ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸ, ದುಡಿಮೆಯೇ ಮಾರ್ಗ ಎಂಬುದನ್ನು ಅರಿತು ಅತ್ಯಂತ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಪಡೆದು ಬಡವರು ಮತ್ತು ಮಧ್ಯಮ ವರ್ಗದವರು ಪ್ರಯೋಜನ ಪಡೆಯಬಹುದು ಎಂದರು.ಬಿಳಕಿ ಶ್ರೀ, ಕವಲೇದುರ್ಗ ಶ್ರೀ, ತಾವರೆಕೆರೆ ಶ್ರೀ, ಕೋಣಂದೂರು ಶ್ರೀ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಪ್ರಮುಖರಾದ ಪಟ್ಟಾಭಿರಾಮ್, ಜ್ಯೋತಿ ಪ್ರಕಾಶ್, ಎನ್.ಜೆ. ರಾಜಶೇಖರ್, ಮೋಹನ ರೆಡ್ಡಿ, ಗನ್ನಿ ಶಂಕರ್, ಮಹೇಶ್, ಕಾಂತೇಶ್, ಡಾ. ಧನಂಜಯ ಸರ್ಜಿ ಮೊದಲಾದವರಿದ್ದರು.
----------------------------ಪೊಟೋ: 6ಎಸ್ಎಂಜಿಕೆಪಿ03
ಶಿವಮೊಗ್ಗದ ಶಿವಾಲಯದಲ್ಲಿನ ಧರ್ಮಸಭೆಯಲ್ಲಿ ಸಾಂಕೇತಿಕವಾಗಿ ಅಕ್ಕಿ ವಿತರಿಸುವ ಮೂಲಕ ಭಾರತ್ ಅಕ್ಕಿ ಯೋಜನೆಗೆ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವಾತ್ಪಾದರು ಚಾಲನೆ ನೀಡಿದರು.