ಸಾರಾಂಶ
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಸನ ತಾಲೂಕಿನ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಯ 195 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಸನ ತಾಲೂಕಿನ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಯ 195 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಹರದನಹಳ್ಳಿ ಬಳಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕಕ್ಕೆ ನೀರಿನ ಮೂಲ ಹೇಮಾವತಿಯೇ ಆಗಿದೆ. ಇದಕ್ಕಾಗಿ ಮಾವಿನಕೆರೆ ಹತ್ತಿರದಿಂದ ಪೈಪ್ಲೈನ್ ಅಳವಡಿಸಲಾಗಿದೆ. ಯೋಜನೆ ವಿನ್ಯಾಸದ ಅವಧಿ 30 ವರ್ಷಗಳಾಗಿದ್ದು, ಇದಕ್ಕಾಗಿ 5 ವರ್ಷಗಳ ನಿರ್ವಹಣೆ ಸೇರಿ 234.30 ಕೋಟಿ ರೂ.ವೆಚ್ಚ ಮಾಡಲಾಗಿದೆ. ಈ ಯೋಜನೆ ಅನುಷ್ಠಾನದಿಂದ 195ಗ್ರಾಮಗಳ ವ್ಯಾಪ್ತಿಯ ಒಬ್ಬ ವ್ಯಕ್ತಿಗೆ ಪ್ರತಿದಿನ ೮೫ ಲೀಟರ್ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಒಟ್ಟು1,13,621 ಮಂದಿ ನದಿ ಮೂಲದ ಕುಡಿಯುವ ನೀರು ಪಡೆಯಲಿದ್ದಾರೆ. ಇದಕ್ಕಾಗಿ ಹರದನಹಳ್ಳಿ ಬಳಿ (13ಎಂಎಲ್ಡಿ) ಪಂಪ್ ಹೌಸ್, ಶುದ್ಧ ನೀರು ಸಂಗ್ರಹಣಾ ನೆಲಮಟ್ಟದ ತೊಟ್ಟಿ ಸೇರಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ನೀರು ಸರಬರಾಜಿಗಾಗಿ 11 ವಲಯ ಮಟ್ಟದ ತೊಟ್ಟಿಗಳು ಹಾಗೂ ೧೪೮ ಗ್ರಾಮಗಳಲ್ಲಿ ಮೇಲ್ತೊಟ್ಟಿ ನಿರ್ಮಿಸಲಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿದ ನಂತರ ಮಾತನಾಡಿದ ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಿದ್ದರು. ಈಗಾಗಲೇ 154 ಹೊಸ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ ಎಂದರು. ಸದರಿ ಯೋಜನೆಗೆ ಡಿಸ್ಟ್ರಿಬ್ಯೂಷನ್ ಸೇರಿ ಒಟ್ಟು 450 ಕೋಟಿ ಖರ್ಚಾಗಿದೆ. ದುದ್ದ, ಬೈರಾಪುರ, ಶಾಂತಿಗ್ರಾಮ ಸೇರಿ 195 ಹಳ್ಳಿಗಳಿಗೆ ಟ್ರಯಲ್ ರನ್ ಮೂಲಕ ನೀರು ಸರಬರಾಜು ಆಗಲಿದೆ. ಇಂದು 125 ಹಳ್ಳಿಗಳಿಗೆ ನೀರು ಹೋಗಲಿದೆ. ಮುಂದಿನ 1 ತಿಂಗಳಲ್ಲಿ195 ಹಳ್ಳಿಗೂ ಶುದ್ಧ ಕುಡಿಯುವ ನೀರು ಹೋಗಲಿದೆ ಎಂದು ಹೇಳಿದರು. ಇನ್ನೂ 30-40 ಟ್ಯಾಂಕ್ ಕಟ್ಟುವುದು ಬಾಕಿ ಇದ್ದು, ಆ ಕಾಮಗಾರಿಯನ್ನೂ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ದುದ್ದ-ಶಾಂತಿಗ್ರಾಮ ಹೋಬಳಿಯಂತೆಯೇ ಇಡೀ ದಂಡಿನಹಳ್ಳಿ ಹೋಬಳಿ, ಕುಂಭೇನಹಳ್ಳಿ ಹೋಬಳಿ, ಆನೆಕೆರೆಯ 85 ಹಳ್ಳಿ ಮತ್ತು ಹೊನ್ನಶೆಟ್ಟಿಹಳ್ಳಿಯ ಎಲ್ಲಾ ಹಳ್ಳಿಗಳಿಗೆ ನದಿ ಮೂಲದ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು. ಕಳೆದ 5 ವರ್ಷಗಳ ಅವಧಿಯಲ್ಲಿ ಕೇಂದ್ರದಿಂದ ಸುಮಾರು 4500 ಕೋಟಿ ರೂ. ಕಳೆದ 5 ವರ್ಷಗಳಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಬಂದಿದೆ ಎಂದು ಹೇಳಿದರು.