ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

| Published : May 31 2025, 12:53 AM IST

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಕೊಲೆ ಸುಲಿಗೆಗಳು ಹೆಚ್ಚಾಗಿವೆ. ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಕೊಲೆ ಸುಲಿಗೆಗಳು ಹೆಚ್ಚಾಗಿವೆ. ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸಿದ್ದರಾಮಯ್ಯ ಸರ್ಕಾರ ಮುಂದುವರೆಯಲು ನೈತಿಕತೆ ಕಡೆದುಕೊಂಡಿದೆ. ಸಿದ್ದರಾಮಯ್ಯ ಅವರು ಕೂಡಲೇ ರಾಜ್ಯದ ಜನರ ಕ್ಷಮೇ ಕೇಳಿ ಕಾನೂನು ಸುವ್ಯವಸ್ಥೆ ಸರಿಪಡಿಸಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಆರೋಪಿಸಿದರು.ಅವರು ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಜನೌಷಧ ಕೇಂದ್ರ ಸ್ಥಗಿತಗೊಂಡಿದ್ದರ ಬಗ್ಗೆ ಮಾಹಿತಿ ಪಡೆದು ಜನೌಷಧ ಕೇಂದ್ರವನ್ನು ಪುನರಾರಂಭ ಮಾಡುವಂತೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿ ನಂತರ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರಿಗೆ ಗುಣಮಟ್ಟದ ಔಷಧಿಗಳನ್ನು ಕಡಿಮೆ ಬೆಲೆಗೆ ಸಿಗಬೇಕು ಎಂಬ ಸದುದ್ದೇಶದಿಂದ ಇಡೀ ದೇಶದಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಸ್ಥಾಪಿಸಿದ್ದ ಜನೌಷಧ ಕೇಂದ್ರಗಳನ್ನು ರಾಜ್ಯದ ಸಿದ್ದರಾಮಯ್ಯ ಸರ್ಕಾರ ಮುಚ್ಚುವ ಮೂಲಕ ಜನರಿಗೆ ವಂಚನೆ ಮಾಡಿದ್ದಾರೆ. ಈ ಕೂಡಲೇ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲವೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಅವರು ಕೇಂದ್ರದ ಎನ್.ಆರ್.ಇ.ಜಿ., ಜೆಜೆಎಂಗಳ, ನಗರೋತ್ಥಾನ, ಅಮೃತ ಯೋಜನೆ ಅನುದಾನವನ್ನು ವಾಪಸ್ಸು ಕಳಿಸುತ್ತೀರ, ಕೇಂದ್ರ ಸರ್ಕಾರದ ರಿಸರ್ವ ಬ್ಯಾಂಕ್‌ ನೋಟುಗಳನ್ನು ವಾಪಸ್ಸು ಕಳಿಸುತ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿ ಇಂತಹ ನೀಚ ಕೆಲಸಗಳನ್ನು ಮಾಡದೆ ಜನೌಷಧ ಕೇಂದ್ರಗಳನ್ನು ಪುನಃ ಪ್ರಾರಂಭಿಸಿ. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದರು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಪ್ರತ್ಯೇಕ ವಾರ್ಡ್, ಐಸಿಯೂ ವಾರ್ಡ್ ಸ್ಥಾಪಿಸಿ, ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಶುಶ್ರೂಷಕರನ್ನು ನೇಮಿಸಿ, ಕೋವಿಡ್ ಪರೀಕ್ಷೆ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಮಾಡಬೇಕು. ಆಕ್ಸಿಜನ್ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದ ಅವರು ರಾಜ್ಯದ ಎಲ್ಲಾ ಆಸ್ಪತ್ರೆಗಳು ಕೇವಲ ನಾಮಕಾವಸ್ತೆ ಆಸ್ಪತ್ರೆಗಳಾಗಿವೆ. ಸರಿಯಾದ ಚಿಕಿತ್ಸೆ ಇಲ್ಲಾ, ವೈದ್ಯರಿಲ್ಲ ಎಂದರು.ಒಳ ಮೀಸಲಾತಿ ಕೊಡಬೇಕೆಂದು ಸುಪ್ರಿಂ ಕೋರ್ಟ್ ಆ.೨ ರಂದೇ ಆದೇಶ ಮಾಡಿದೆ. ಈಗಾಗಲೇ ನೆರೆ ರಾಜ್ಯ ಆಂದ್ರ ಪ್ರದೇಶ, ತೆಲಂಗಾಣ, ಹರಿಯಾಣ, ಪಂಜಾಬ್ನಲ್ಲಿ ಜಾರಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ೨೦೨೩ರ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲನೆ ಕ್ಯಾಬಿನೆಟ್ ಸಭೆಯಲ್ಲಿ ಮಾಡುವುದಾಗಿ ಹೇಳಿದ್ದೀರಿ. ಒಳಮೀಸಲಾತಿಯಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ. ೧೦೧ ಜಾತಿಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ಹುದ್ದೆ, ಸರಕಾರಿ ಸವಲತ್ತುಗಳು ದೊರಕುತ್ತವೆ. ಆದ್ದರಿಂದ ಕಳೆದ ೩೦ ವರ್ಷಗಳಿಂದ ರಾಜ್ಯದ ಉದ್ದಗಲಕ್ಕೆ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಜುಲೈ ೧ ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದಾರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್, ಮಧುಗಿರಿ ವಿಭಾಗದ ಮಹಿಳಾ ಬಿಜೆಪಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಉಮಾ ವಿಜಯರಾಜ್, ಮಧುಗಿರಿ ವಿಭಾಗದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್.ಕೆ.ಶ್ರೀನಿವಾಸ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ಅಧ್ಯಕ್ಷ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ರೈಲ್ವೆ ಮಂಡಳಿ ಸದಸ್ಯ ವೀರೇಶ್, ಡಿ.ಪಿ.ರಂಗನಾಥ್, ನಗರಸಭಾ ಸದಸ್ಯ ರಂಗರಾಜು, ಗ್ರಾ.ಪಂ. ಸದಸ್ಯ ಉಮೇಶ್, ಮದಲೂರು ಮೂರ್ತಿ ಮಾಸ್ಟರ್, ಕೋಟೆ ರವಿ, ಗುರುದಾಸ್, ಹನುಮಂತನಾಯ್ಕ, ಮೂಗನಹಳ್ಳಿ ರಾಮು, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದೇಶ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ, ಡಾ.ರಾಜಕುಮಾರ್, ಮಹಿಳಾ ಘಟಕದ ಲಲಿತಮ್ಮ, ಪದ್ಮ ಮಂಜುನಾಥ್, ಯಶಸ್ವಿನಿ, ನಾಗರತ್ನ ಸೇರಿದಂತೆ ಹಲವರು ಹಾಜರಿದ್ದರು.