ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ವಕೀಲ ವೃತ್ತಿಯು ಗೌರವ ಮತ್ತು ಶ್ರೇಷ್ಟವಾದ ಹುದ್ದೆಯಾಗಿದೆ. ವಕೀಲರ ವೃತ್ತಿಯನ್ನು ಪ್ರಾರಂಭಿಸುವ ಕಿರಿಯ ವಕೀಲರಿಗೆ ಹಿರಿಯ ವಕೀಲರು ಹೆಚ್ಚೆಚ್ಚು ಕಾನೂನಿನ ಮಾರ್ಗದರ್ಶನ ಮಾಡಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮತ್ತು ತುಮಕೂರು ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ದೇವದಾಸ್ ಹೇಳಿದರು.ಅವರು ನಗರದ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಕೀಲರ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಕಾನೂನನ್ನು ತಿಳಿದುಕೊಂಡರೆ ಒಳ್ಳೆಯ ವಕೀಲರಾಗಲು ಸಾಧ್ಯ. ವಕೀಲರು ಶ್ರಮಪಟ್ಟು ಕೆಲಸ ಮಾಡಿದವರಿಗೆ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಯಾವುದೇ ಹುದ್ದೆಗಳನ್ನು ನಿರ್ವಹಿಸಿದರೂ ಸಿಗದಂತಹ ಪ್ರೀತಿ, ವಿಶ್ವಾಸ ವಕೀಲ ವೃತ್ತಿಯಲ್ಲಿ ಸಿಗುತ್ತದೆ ಎಂದ ಅವರು, ಸ್ವಾತಂತ್ರ್ಯ ಭಾರತದಲ್ಲಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನವನ್ನು ವಕೀಲರ ದಿನವನ್ನಾಗಿ ಆಚರಿಸುತ್ತೇವೆ. ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಕಾನೂನಿನ ಜಾಣ್ಮೆ, ಕಾನೂನಿನ ಕ್ಷೇತ್ರದಲ್ಲಿ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಬೇಕು ಎಂದರು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರಂಗಸ್ವಾಮಿ ನಟರಾಜ್ ಮಾತನಾಡಿ ವಕೀಲರು ರೈತರಿಗೆ, ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು. ಎಷ್ಟೋ ಜನ ರೈತರಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಅಂತಹವರಿಗೆ ಸವಲತ್ತು ಕೊಡಿಸುವ ಕೆಲಸವಾಗಬೇಕು. ವಕೀಲರು ಕೇವಲ ಕೇವಲ ಆದಾಯಕ್ಕೆ ಕೆಲಸ ಮಾಡಬಾರದು. ಪ್ರತಿಯೊಬ್ಬ ವಕೀಲರು ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಂಡು ವರ್ಷಕ್ಕೆ 10 ಜನರಿಗಾದರೂ ಕಡುಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಇದು ವಕೀಲರ ವೃತ್ತಿಗೆ ನಿಡುವ ಕೊಡುಗೆಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಕೀಲರ ವೃತ್ತಿಯಲ್ಲಿ 25 ವರ್ಷ ಪೂರ್ಣಗೊಳಿಸಿದ ಹಿರಿಯ ವಕೀಲರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ಕುಮಾರ್, ಶಿರಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ.ಜಿ, ಅಕ ಸಿವಿಲ್ ನ್ಯಾಯಾಧೀಶರಾದ ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಎಂ.ಎಸ್.ಮಧುಸೂಧನ್, ಎಸ್.ಬಸವರಾಜು, ವಕೀಲರ ಸಂಘದ ಅಧ್ಯಕ್ಷರಾದ ಎಚ್.ಪಿ.ಧರಣೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ, ಉಪಾಧ್ಯಕ್ಷರಾದ ಸಿ.ಸರಸ್ವತಿ, ಜಂಟಿ ಕಾರ್ಯದರ್ಶಿ ಈರಣ್ಣ.ಡಿ, ಖಜಾಂಚಿ ರಾಮಕೃಷ್ಣ.ಬಿ.ಆರ್., ವಕೀಲರ ಸಂಘದ ಮಾಜಿ ಅಧ್ಯಕ್ಷ ಜವನಯ್ಯ, ವಕೀಲರಾದ ವೈ.ಆರ್.ಬಸವರಾಜು, ಆರ್.ಸರ್ವೇಶ್, ಬಿ.ಕೆ.ಚಂದ್ರಶೇಖರ್, ಚಂದ್ರಾಧರ, ಎಚ್.ವಾಜೀದ್ ಅಹಮದ್, ಡಿ.ಬಿ.ಸಿದ್ದಯ್ಯ, ಕೆ.ರಾಮಕೃಷ್ಣ, ಹೊನ್ನೇಶ್ ಗೌಡ, ಎಚ್.ಸಿ.ಈರಣ್ಣ, ಸಿದ್ದರಾಜು.ಬಿ ಸೇರಿದಂತೆ ಹಲವರು ಹಾಜರಿದ್ದರು.