ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನ ಸಂಘ ಪರಿವಾರ ನಡೆಸುವ ಪಥ ಸಂಚಲನಕ್ಕೆ ಒಂದು ವೇಳೆ ನ್ಯಾಯಾಲಯದಿಂದ ಆದೇಶ ಕೊಟ್ಟಿದ್ದೇ ಆದರೆ, ನ್ಯಾಯಾಧೀಶರು ಸಂವಿಧಾನ ಪೀಠದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಅವರು ಒಂದು ಪಕ್ಷದ ಗುಲಾಮರಾದಂತೆ ಎಂದು ನ್ಯಾಯಾಧೀಶರನ್ನೇ ನಿಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನ್ಯಾಯಾಧೀಶರಿಗೆ ಜ್ಞಾನ ಪ್ರಕಾಶ ಸ್ವಾಮೀಜಿ ಬೆದರಿಕೆ ಹಾಗೂ ಅಸಂವಿಧಾನಿಕ ಪದ ಬಳಕೆ ಮಾಡಿರುವುದನ್ನು ಖಂಡಿಸಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ಪಟ್ಟಣದ ವಕೀಲರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮರೀಗೌಡ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆ ನಡೆಸಿ ಜ್ಞಾನ ಪ್ರಕಾಶ್ ಸ್ವಾಮೀಜಿ ನ್ಯಾಯಾಧೀಶರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ನ್ಯಾಯಾಲಯ ಕಲಾಪಗಳಿಂದ ದೂರ ಉಳಿಯಲು ತೀರ್ಮಾನಿಸಿ ಹೊರ ಉಳಿದು ಪ್ರತಿಭಟನೆ ನಡೆಸಿದರು.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನ ಸಂಘ ಪರಿವಾರ ನಡೆಸುವ ಪಥ ಸಂಚಲನಕ್ಕೆ ಒಂದು ವೇಳೆ ನ್ಯಾಯಾಲಯದಿಂದ ಆದೇಶ ಕೊಟ್ಟಿದ್ದೇ ಆದರೆ, ನ್ಯಾಯಾಧೀಶರು ಸಂವಿಧಾನ ಪೀಠದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಅವರು ಒಂದು ಪಕ್ಷದ ಗುಲಾಮರಾದಂತೆ ಎಂದು ನ್ಯಾಯಾಧೀಶರನ್ನೇ ಬೆದರಿಸುವ ತಂತ್ರ ಹಾಗೂ ನ್ಯಾಯಾಧೀಶರನ್ನು ನಿಂಧಿಸಿರುವುದು ಸರಿಯಲ್ಲ. ಕೂಡಲೇ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವರಾಮು, ಹಿರಿಯ ವಕೀಲ ಮೂರ್ತಿ, ಚನ್ನಪ್ಪ, ಶಿವರಾಜು, ಪ್ರಮೋದ್, ಡಿ. ಕೃಷ್ಣೇಗೌಡ, ಸಿ.ಕೆ. ಸೋಮು ಸೇರಿದಂತೆ ಇತರರು ಇದ್ದರು.

ಮಹಿಳಾ ಡೇರಿಗೆ ರತ್ನಮ್ಮ ಅಧ್ಯಕ್ಷರಾಗಿ ಆಯ್ಕೆ

ಮಂಡ್ಯ: ತಾಲೂಕಿನ ಅವ್ವೇರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ರತ್ನಮ್ಮ ಸಿದ್ದಲಿಂಗಪ್ಪ, ಉಪಾಧ್ಯಕ್ಷರಾಗಿ ರತ್ನಪ್ಪ ಸಿದ್ದಪ್ಪ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿ ಸಂತೋಷ್‌ ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.‌ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಸದಸ್ಯರಾದ ಶಶಿಕಲಾ, ನಿಂಗರಾಜಮ್ಮ, ಪುಟ್ಟಮಣಿ, ಭಾಗ್ಯಲಕ್ಷ್ಮಿ, ಚಂದನಾ ಎ.ಎಸ್‌, ರತ್ನ ಮಹೇಶ್‌, ರೂಪಾ ಆರ್‌, ಮುಖಂಡರಾದ ಗ್ರಾ.ಪಂ.ಸದಸ್ಯ ಎ.ಎಸ್‌.ಜಗದೀಶ್‌, ಎ.ಎಂ.ಮಂಜುನಾಥ್‌, ನವೀನ್‌ಕುಮಾರ್‌, ರುದ್ರೇಶ, ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.