ಕನ್ನಡಪ್ರಭ ವಾರ್ತೆ ಕಾರವಾರ

ಇಲ್ಲಿನ ಜಿಲ್ಲಾ ವಕೀಲರ ಸಂಘ ಈಚೆಗೆ ಮನ್ಸೂನ್ ವಾಕ್ (ಮುಂಗಾರು ನಡಿಗೆ) ಎಂಬ ಕಾರ್ಯಕ್ರಮವನ್ನು ಜೀವ ವೈವಿಧ್ಯತೆ ರಕ್ಷಿಸಿ ಎಂಬ ಸಂದೇಶದೊಂದಿಗೆ ನಡೆಸಿತು.

ಅಂಕೋಲಾ ತಾಲೂಕಿನ ಗುಂಡಬಾಳ ಎಂಬ ಅರಣ್ಯ ಪ್ರದೇಶದಲ್ಲಿ ಸುಮಾರು 5 ಕಿಮೀ ನಡೆಯುವುದರ ಮೂಲಕ ಪರಿಸರ ಕಾಳಜಿ ತೋರಿಸಿದರು.

ಅರಣ್ಯದ ಮಹತ್ವ, ಪಶ್ಚಿಮ ಘಟ್ಟದ ಅರಣ್ಯ ಈ ಜಗತ್ತಿನ ಮೇಲೆ ಬೀರುವ ಪರಿಣಾಮಗಳು, ಜೀವ ವೈವಿದ್ಯತೆಗಳ ಬಗ್ಗೆ ವಕೀಲರು ಅರಣ್ಯದ ನಡುವೆಯೇ ಚರ್ಚಿಸಿದರು.

ಜೀವ ವೈವಿಧ್ಯತೆ ಕಾಯ್ದೆಯ ಮೇಲೆ ಹಿರಿಯ ವಕೀಲ ಆರ್.ವಿ. ಭಟ್ಟ ಮಾತನಾಡಿದರು.


ಕಾಡಿನ ನಡುವೆ ಮನೆಯೊಂದರಲ್ಲಿ ನಡೆದ ಸಭೆಯಲ್ಲಿ ಹಿರಿಯ ವಕೀಲ ಬಿ.ಎಸ್. ಪೈ, ಪರಿಸರದ ಕುರಿತು ವಿಶ್ಲೇಷಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಪಿ.ಎಂ. ನಾಯಕ, ವಕೀಲರ ಒಗ್ಗಟ್ಟು ಮತ್ತು ಪರಿಸರ ಪ್ರೀತಿಯನ್ನು ಮೆಚ್ಚಿದರು.

ಅಲ್ಲಿಂದ ಕೋಗ್ರೆ ಗುಡ್ಡಕ್ಕೆ ಬಂದು ಸಂಪಿಗೆ ಗಿಡ ನೆಟ್ಟರು. ಬಾಸಗೋಡಿನ ನಡುಬೇಣಕ್ಕೆ ಬಂದು ಸಸಿ ನೆಟ್ಟಿದ್ದನ್ನು ವೀಕ್ಷಿಸಿದರು.

ಸಂಘದ ಅಧ್ಯಕ್ಷ ನಾಗರಾಜ ನಾಯಕ, ಕಾರ್ಯದರ್ಶಿ ನಾಗರಾಜ ದೇಶಭಂಡಾರಿ, ಕಾರ್ಯಕಾರಿ ಸದಸ್ಯರಾದ ರಾಜೇಶ ಆಚಾರಿ, ಮಾರುತಿ ಬಿ. ನಾಯ್ಕ್ ಮತ್ತು ದೀಪಾ ಎಸ್. ನಾಯ್ಕ್ ಮತ್ತಿತರ ವಕೀಲರು ಭಾಗಿಯಾಗಿದ್ದರು.

ಲಕ್ಷ್ಮಿ ರಾಣೆ ನಿರ್ವಹಿಸಿದರು. ಚರಣ ನಾಯ್ಕ ವಂದಿಸಿದರು. ಜೆ.ಪಿ. ನಾಯ್ಕ್ ನಿರೂಪಿಸಿದರು.ಗೋವಾದಿಂದ ಗಾಂಜಾ ತಂದು ಮಾರಾಟಕ್ಕೆ ಯತ್ನ; ಇಬ್ಬರ ಬಂಧನ:

ಗೋವಾದಿಂದ ಅಕ್ರಮವಾಗಿ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ಬಿಣಗಾ ಸಮೀಪದ ರಾಮನಗರ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಂದ ಅಂದಾಜು ₹25 ಸಾವಿರ ಮೌಲ್ಯದ ಸುಮಾರು 465 ಗ್ರಾಂ ಗಾಂಜಾ, ಒಂದು ಬೈಕ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ಕಾರವಾರ ತಾಲೂಕಿನ ಸದಾಶಿವಗಡದ ತಾರಿವಾಡ ನಿವಾಸಿಗಳಾದ ನಾಗರಾಜ್ (26) ಹಾಗೂ ವಿನೋದ್ ಎಂದು ಗುರುತಿಸಲಾಗಿದೆ.

ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.