ಸಾರಾಂಶ
ಹಾನಗಲ್ಲ: ಮಾನವನ ಸಾಧನೆಯಲ್ಲಿ ಅಸಾಧ್ಯವೆಂಬುದಿಲ್ಲ, ಸಾಧ್ಯತೆಗಾಗಿ ಶ್ರದ್ಧೆಯಿಂದ ಪರಿಶ್ರಮಿಸುವ ಅಗತ್ಯ ಬಹಳವಾಗಿದ್ದು, ನಾಯಕರಾದವರು ಆತ್ವವಿಶ್ವಾಸದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ತಾಳ್ಮೆ ಉಳ್ಳವರಾಗಿರಬೇಕು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕಿನ ಸ್ವಸಹಾಯ ಸಂಘಗಳ ಮಹಿಳೆಯರು ಸಂಘಟಕರಿಗಾಗಿ ಆಯೋಜಿಸಿದ ಸಂಘಟನೆಯಲ್ಲಿ ನಾಯಕರ ಪಾತ್ರ ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಂಘಟನೆ ಶಕ್ತಿ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ನಾಯಕರಾಗುವವರಿಗೆ ದೂರ ದೃಷ್ಟಿ, ಪರಿಶ್ರಮದ ಅರಿವಿರಬೇಕು. ವಿನಯ, ತಂಡಕ್ಕೆ ಶಕ್ತಿ ತುಂಬುವ ಶಕ್ತಿ, ಅತ್ಯುತ್ತಮ ಸಂವಹನ ಕೌಶಲವೂ ಬೇಕು. ಧೈರ್ಯ ಸಾಹಸಗಳ ಮೂಲಕ ಸಮಸ್ಯೆಗಳನ್ನು ಎದುರಿಸುವ ಬಲ ಇರುವವನು ನಾಯಕನಾಗಬಲ್ಲ. ನಾಯಕನಲ್ಲಿ ಮಾರ್ಗದರ್ಶಕ ಗುಣ ಸ್ವಾಭಾವಗಳು ಅತ್ಯಂತ ಮುಖ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗಾಗಿ ಮುನ್ನಡೆಯಬೇಕು. ರಾಜಕೀಯ ನಾಯಕತ್ವ ಈ ದಿನಗಳಲ್ಲಿ ಅತ್ಯಂತ ಭಿನ್ನವಾಗಿದ್ದು ಅವಕ್ಕೆ ನಮ್ಮ ಹೋಲಿಸಿಕೊಳ್ಳುವ ಅಗತ್ಯವಿಲ್ಲ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ, ಇಡೀ ಕರ್ನಾಟಕದಲ್ಲಿ ನಾಯಕತ್ವದ ಶಕ್ತಿ ಸಾಮರ್ಥ್ಯವನ್ನು ಮಹಿಳಾ ಸಂಘಟನೆಗಳ ಮೂಲಕ ಸಾಕಾರಗೊಳಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾದರಿಯಾಗಿದೆ. ಡಾ. ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಪ್ರದೇಶದ ಜನರನ್ನು ಜಾಗೃತಗೊಳಿಸಲು ಅಲ್ಲಿನ ಮಹಿಳೆಯರಲ್ಲಿನ ಇಚ್ಛಾಶಕ್ತಿಯನ್ನು ಗುರುತಿಸಿ ನಾಯಕತ್ವ ನೀಡಲು ಮುನ್ನಡೆದರು. ಅದರ ಫಲವೇ ಈಗ ರಾಜ್ಯದ ಎಲ್ಲ ಜಿಲ್ಲೆ ತಾಲೂಕುಗಳಲ್ಲಿ ಸಂಘಟನೆಗಳು ಸಕ್ರಿಯ ಸಶಕ್ತವಾಗಿವೆ. ಮಹಿಳೆಯರ ನಾಯಕತ್ವದ ಫಲವಾಗಿಯೇ ಈಗ ಆರ್ಥಿಕ ಸಬಲ ಸಂಘಟನೆಗಳಾಗಿವೆ. ಒಗ್ಗಟ್ಟು ಸಾಧಿಸಿ ಸಂಸ್ಥೆಯ ಸಹಾಯವನ್ನು ಪಡೆದು, ತಮ್ಮ ಆರ್ಥಿಕ ಸಂಪನ್ಮೂಲವನ್ನೂ ಕೂಡ ಜೋಡಿಸಿ ಮಾದರಿ ಸಂಘಟನೆಗಳಿಗೆ ಯಶಸ್ಸು ಸಿಕ್ಕಿದೆ. ಇದರ ಹಿಂದೆ ಕೆಲಸ ಮಾಡಿರುವುದು ಮಹಿಳಾ ಶಕ್ತಿ. ಅವರಲ್ಲಿನ ನಾಯಕತ್ವ ಎಂದರು.
ಸಂಘದ ಮೇಲ್ವಿಚಾರಕರಾದ ಅಣ್ಣಪ್ಪ ಹೊಸಮನಿ, ರಾಕೇಶ ಸಾಣೇರ, ರೇಷ್ಮಾ ಮೋಗೇರ, ಗಣೇಶ ಕಡಗೊಂಡ, ನೇತ್ರಾವತಿ ಮಂಡಿಗನಾಳ, ನಾಗರಾಜ ಪಾರಮ್ಮನವರ, ಮಹಂತೇಶ ಹರಕುಣಿ, ನಾಗರಾಜ ಪಾರಮ್ಮನವರ, ಯಶೋಧಾ ತೋಟದ, ಚಂದ್ರಮ್ಮ ಸತಿಗಿಹಳ್ಳಿ, ತಿಪ್ಪೇಸ್ವಾಮಿ ಚಿಕ್ಕಕಬ್ಬಿಗೇರಿ, ಶ್ರೀನಿವಾಸ ಮೋಗೇರ, ಗೌರಮ್ಮ ಗಂಜೀಗಟ್ಟಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.