ವಿದ್ಯೆ ಕಲಿತು ಜ್ಞಾನ ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ: ಪ್ರೊ.ಕೆ.ಶಿವಚಿತ್ತಪ್ಪ ಸಲಹೆ

| Published : Dec 02 2024, 01:18 AM IST

ವಿದ್ಯೆ ಕಲಿತು ಜ್ಞಾನ ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ: ಪ್ರೊ.ಕೆ.ಶಿವಚಿತ್ತಪ್ಪ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ರಾಜವೀರ ಮದಕರಿ ನಾಯಕರಲ್ಲಿ ಆಪ್ತ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಮುದ್ದ ಹನುಮಂತಪ್ಪನ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ ಕೇವಲ ವ್ಯಕ್ತಿಯಲ್ಲದೆ ಮಹಿಳೆಯರ ಒಂದು ಶಕ್ತಿಯಾಗಿದ್ದಾರೆ. ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿ ವೀರ ಮರಣ ಹೊಂದಿದ ಒನಕೆ ಓಬವ್ವ ಇಂದಿಗೂ ಅದರ್ಶ ಮಹಿಳೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರತಿಯೊಬ್ಬರೂ ವಿದ್ಯೆ ಕಲಿಯುವ ಮೂಲಕ ಜ್ಞಾನ ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವಂತೆ ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಸಲಹೆ ನೀಡಿದರು.

ಪಟ್ಟಣದ ಭಗವಾನ್ ಬುದ್ಧ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಡೆದ ವೀರ ಒನಕೆ ಓಬವ್ವಳ ಜಯಂತಿಯಲ್ಲಿ ಮಾತನಾಡಿ, ಗುರಿ, ಸಾಧನೆ ಮುಟ್ಟಲು ಶಿಕ್ಷಣ ಅಗತ್ಯ. ಜ್ಞಾನಕ್ಕಿಂತ ಪರಿಪೂರ್ಣವಾದ ವಸ್ತು ಬೇರೊಂದಿಲ್ಲ. ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೊಂದೇ ಪರಿಹಾರ. ಧ್ಯಾನ ಹೆಚ್ಚಿದಂತೆ ಜ್ಞಾನ ಹೆಚ್ಚುವುದು, ಜ್ಞಾನ ಹೆಚ್ಚಿದಂತೆಲ್ಲಾ ಮೌನ ಹೆಚ್ಚಾಗುತ್ತದೆ. ಬುದ್ಧರ ಸಂದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕೆಂದು ಹೇಳಿದರು.

ಚಿತ್ರದುರ್ಗದ ರಾಜವೀರ ಮದಕರಿ ನಾಯಕರಲ್ಲಿ ಆಪ್ತ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಮುದ್ದ ಹನುಮಂತಪ್ಪನ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಓಬವ್ವ ಕೇವಲ ವ್ಯಕ್ತಿಯಲ್ಲದೆ ಮಹಿಳೆಯರ ಒಂದು ಶಕ್ತಿಯಾಗಿದ್ದಾರೆ. ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿ ವೀರ ಮರಣ ಹೊಂದಿದ ಒನಕೆ ಓಬವ್ವ ಇಂದಿಗೂ ಅದರ್ಶ ಮಹಿಳೆಯಾಗಿದ್ದಾರೆಂದು ತಿಳಿಸಿದರು.

ಭಗವಾನ್‌ ಬುದ್ಧ ಶಿಕ್ಷಣ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಛಲವಾದಿ ವೀರ ಮಹಿಳೆ ಓಬವ್ವನಂತಹ ಮಹಿಳೆಯರ ಬಗ್ಗೆ ಇಂದಿನ ಯುವಜನತೆಗೆ ತಿಳಿಸಬೇಕಿದೆ. ಮಹಿಳೆಯರಲ್ಲಿಯೂ ಅಪಾರ ಶಕ್ತಿ ಅಡಗಿದೆ ಎಂಬುದನ್ನು ಓಬವ್ವ ತೋರಿಸಿಕೊಟ್ಟಿದ್ದಾರೆ ಎಂದರು.

ಪ್ರಶಿಕ್ಷಣಾರ್ಥಿಗಳು ಮಹನೀಯರ ಜೀವನ ಚರಿತ್ರೆ ಓದಿ ಮಕ್ಕಳಿಗೆ ಅದರ್ಶಗಳನ್ನು ತಿಳಿಸಲು ಮುಂದಾಗಬೇಕು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಹಲವು ಪ್ರತಿಭೆಗಳು ಅಡಗಿದ್ದು, ತಮ್ಮ ಪ್ರತಿಭೆಯನ್ನು ಬರಹದ ರೂಪದಲ್ಲಿ ಮೂಡಿಸಬೇಕೆಂದು ಹೇಳಿದರು.

ಚಂಕಮನ ೨/೨೦೨೪ರ ವಿಶೇಷ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು. ಜೇತುವನ ಚೆನ್ನಾಲಿಂಗನಹಳ್ಳಿಯ ಮನೋರಖ್ಖಿತ ಭಂತೇಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಾಹಿತಿ ಪೂರಿಗಾಲಿ ಮುರುಡೇಶ್ ಮೂರ್ತಿ, ಪ್ರಾಂಶುಪಾಲರಾದ ಜಿ.ಎಸ್.ಸುಧಾಮಣಿ, ಡಾ. ಬಾಲಸುಭ್ರಹ್ಮಣ್ಯ ಶಿವಶಂಕರ್, ಚೇತನಾ ಪಾಂಚಜನ್ಯ ವಿದ್ಯಾಪೀಠ ಆಡಳಿತಾಧಿಕಾರಿ ಡಾ.ಎ.ಸೋಮಶೇಖರ್, ಸುರೇಶ್, ಜ್ಞಾನಧಾರ ಶಾಲೆ ಮುಖ್ಯ ಶಿಕ್ಷಕಿ ಸರಿತಾ ಪ್ರಶಾಂತ್, ಮುಖಂಡರಾದ ಚೇತನ್‌ಕುಮಾರ್, ನಿಂಗಣ್ಣಯ್ಯ, ಮಲ್ಲಿಕಾರ್ಜುನಸ್ವಾಮಿ, ಶಿವಕುಮಾರ್, ಎ.ಸೋಮಶೇಖರ್ ಸೇರಿದಂತೆ ಇತರರು ಇದ್ದರು.