ಸಾರಾಂಶ
ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೈಪಿಡಿ ಹಾಗೂ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯ ವಿನಂತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಉದ್ಯಾವರ
ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾದ ನಮ್ಮ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಅದೆಷ್ಟೋ ಮಹಾನುಭಾವರು ಕನ್ನಡ ಮಾಧ್ಯಮದಲ್ಲಿ ಕಲಿತು ವಿಶ್ವ ಮಾನ್ಯರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕ ಅಧ್ಯಕ್ಷ ಬಂಟಕಲ್ಲು ಪುಂಡಲೀಕ ಮರಾಠೆ ಹೇಳಿದರು.ಅವರು ಇಲ್ಲಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೈಪಿಡಿ ಹಾಗೂ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯ ವಿನಂತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡವು ಕ್ರಿಸ್ತ ಪೂರ್ವದಿಂದಲೂ ಪ್ರಚಲಿತದಲ್ಲಿದ್ದು, ತನ್ನದೇ ಲಿಪಿ ಹೊಂದಿದೆ. ಅನೇಕ ಕವಿವರೇಣ್ಯರಿಂದ ಶ್ರೇಷ್ಠ ಕೃತಿಗಳು ರಚನೆಗೊಂಡಿವೆ. 8 ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಭಾಷೆ ತನ್ನದಾಗಿಸಿಕೊಂಡಿದೆ. ಇಂತಹ ಕನ್ನಡ ಭಾಷೆಯ ಪರಂಪರೆ, ಇತಿಹಾಸ, ಸಂಸ್ಕೃತಿಗಳ ಅಧ್ಯಯನದಿಂದ ಮಕ್ಕಳಲ್ಲಿ ಸನ್ನಡತೆ, ಸದ್ಗುಣ, ಸ್ವಾಭಿಮಾನ, ಸಾಧಿಸುವ ಛಲ, ಪ್ರಶ್ನಿಸುವ ಮನೋಭಾವ ಮೊದಲಾದ ಮಾನವತಾ ಗುಣಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ, ವಿದ್ಯಾರ್ಥಿಗಳಿಗೆ ಶಾಲಾ ಕೈಪಿಡಿಯ ಉಪಯೋಗದ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮೇಶ್ ಕಕ್ಕೇರ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಕೃಷ್ಣ ಕುಮಾರ್ ರಾವ್ ಮಟ್ಟು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ರತಿ ವಂದಿಸಿದರು. ಸಹ ಶಿಕ್ಷಕ ವಿಕ್ರಂ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.