ಸಾರಾಂಶ
ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಸೋಮವಾರ ‘ಯಕ್ಷಗಾನದಲ್ಲಿ ಗೀತೆಯ ಮೆರಗು’ ಎಂಬ ವಿಷಯದ ಕುರಿತಂತೆ ಬಹುಮುಖ ಪ್ರತಿಭೆಯ ಖ್ಯಾತ ವಾಗ್ಮಿ ಪ್ರಭಾಕರ್ ಜೋಶಿ ಅವರಿಂದ ಶಿಖರೋಪನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಸೋಮವಾರ ‘ಯಕ್ಷಗಾನದಲ್ಲಿ ಗೀತೆಯ ಮೆರಗು’ ಎಂಬ ವಿಷಯದ ಕುರಿತಂತೆ ಬಹುಮುಖ ಪ್ರತಿಭೆಯ ಖ್ಯಾತ ವಾಗ್ಮಿ ಪ್ರಭಾಕರ್ ಜೋಶಿ ಅವರಿಂದ ಶಿಖರೋಪನ್ಯಾಸ ನಡೆಯಿತು.ಅವರು ಯಕ್ಷಗಾನದಲ್ಲಿ ಭಗವದ್ಗೀತೆಯ ಸಾಧ್ಯತೆಗಳನ್ನು ಧರೆಗಿಳಿಸಿದ ಮಲ್ಪೆ ರಾಮದಾಸ್ ಸಾಮಗರನ್ನು ಸೇರಿದಂತೆ ಅನೇಕ ಮಂದಿ ಯಕ್ಷಗಾನ ಸಾಧಕ ಮಹನೀಯರ ಸಾಧನೆಗಳನ್ನು ಸ್ಮರಿಸಿಕೊಂಡರು.ಈ ವಿಶ್ವ ಗೀತಾ ಪರ್ಯಾಯದಲ್ಲಿ ಭಗವದ್ಗೀತೆಯ ವಿವಿಧ ಆಯಾಮಗಳನ್ನು ತೆರೆದಿಡಲು ಸಂಕಲ್ಪಿಸಿದ ಪೂಜ್ಯ ಪರ್ಯಾಯ ಶ್ರೀಪಾದರ ಉಜ್ವಲ ವಿಚಾರ ಧಾರೆಯನ್ನು ಶ್ಲಾಘಿಸಿ ಕಳೆದ ಪುತ್ತಿಗೆ ಶ್ರೀಗಳ ಪರ್ಯಾಯದಲ್ಲಿ ಭವ್ಯ ಗೀತಮಂದಿರವನ್ನೇ ಕಲಾ ವೇದಿಕೆಯನ್ನು ಬಳಸಿ ಭಗವದ್ಗೀತಾ ವಿಶ್ವರೂಪ ದರ್ಶನವನ್ನು ತೋರಿಸಿದ ಆ ಅದ್ಭುತವಾದ ಶ್ರೀಗಳ ಕಲ್ಪನೆಯನ್ನು ಸಾಕಾರಗೊಳಿಸಿದ ಖ್ಯಾತ ರಂಗಕರ್ಮಿ ಸಾಹಿತಿ ದಿ || ಉದ್ಯಾವರ ಮಾಧವಾಚಾರ್ಯರ ಅಪೂರ್ವ ಸಾಧನೆಯನ್ನು ರೋಮಾಂಚಿತರಾಗಿ ಸಭೆಗೆ ವಿವರಿಸಿದರು.ಅಂತೆಯೇ ಉಡುಪಿ ಮಠಗಳಲ್ಲಿ ಪ್ರಾಚೀನ ಕಾಲದಿಂದಲೂ ನಡೆಯುತ್ತಿದ್ದ ಮೇಳಗಳ ಬಗ್ಗೆ ಪ್ರಸ್ತಾವಿಸಿ, ಇದೀಗ ಅದರ ಪುನರುತ್ಥಾನವಾಗಿ ಯಕ್ಷಗಾನದ ಮೇಲೆ ಎಲ್ಲ ಶ್ರೀಗಳು ಸೇರಿ ನೀಡುವ ಪ್ರೋತ್ಸಾಹವನ್ನೂ ನೆನೆದರು.ಸಭೆಯ ಆದಿಯಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪ್ರಭಾಕರ ಜೋಷಿ ಅವರನ್ನು ಸನ್ಮಾನಿಸಿದರು.ಹಾಗೆಯೇ ಖ್ಯಾತ ಉದ್ಯಮಿ ಕೋಲ್ಕತ್ತಾದ ಕಲ್ವಾನಿ ದಂಪತಿಗಳನ್ನು ಅವರ ಸಾಧನೆಯನ್ನು ಗಮನಿಸಿ ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿಯನ್ನು ನೀಡಿ ಹರಸಿದರು.