ಕನ್ನಡಪ್ರಭ ವಾರ್ತೆ ಅಮೀನಗಡಗಣೇಶೋತ್ಸವ ಸಮಿತಿಗಳು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು, ಡಿ.ಜೆ. ಸೌಂಡ್ ನಿಷೇದಿಸಿದ್ದು, ಯಾವುದೇ ತರಹದ ಅಹಿತಕರ ಘಟನೆಗೆ ಆಸ್ಪದ ಕೊಡಬಾರದೆಂದು ಅಮೀನಗಡ ಪೊಲೀಸ್‌ ಠಾಣಾ ಪಿಎಸ್‌ಐ ಚೆನ್ನಯ್ಯ ದೇವೂರ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಗಣೇಶೋತ್ಸವ ಸಮಿತಿಗಳು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು, ಡಿ.ಜೆ. ಸೌಂಡ್ ನಿಷೇದಿಸಿದ್ದು, ಯಾವುದೇ ತರಹದ ಅಹಿತಕರ ಘಟನೆಗೆ ಆಸ್ಪದ ಕೊಡಬಾರದೆಂದು ಅಮೀನಗಡ ಪೊಲೀಸ್‌ ಠಾಣಾ ಪಿಎಸ್‌ಐ ಚೆನ್ನಯ್ಯ ದೇವೂರ ಎಚ್ಚರಿಸಿದರು.

ಅಮೀನಗಡ ಪೊಲೀಸ್‌ ಠಾಣೆಯಲ್ಲಿ ಗಣೇಶೋತ್ಸವ ಸಮಿತಿಗಳ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದರು. ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 2026ರ ಗಣೇಶೋತ್ಸವ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈಗಾಗಲೇ ಅದರ ಕರಪತ್ರ ಹಂಚಲಾಗಿದೆ. ಯಾವುದೇ ಕಾರಣಕ್ಕೂ ಡಿ.ಜೆ. ಬಳಸುವುದಾಗಲಿ, ಪಿಒಪಿ ಗಣೇಶ ಪ್ರತಿಷ್ಠಾಪಿಸುವುದಾಗಲಿ ನಿಷೇಧಿಸಲಾಗಿದೆ.

17 ಮಾರ್ಗ ಸೂಚಿಗಳನ್ನು ಗಣೇಶೋತ್ಸವ ಸಮಿತಿಗಳು ಕಡ್ಡಾಯವಾಗಿ ಪಾಲಿಸಲೇ ಬೇಕು. ಗಣೇಶೋತ್ಸವ ಪೆಂಡಾಲಿನಲ್ಲಿ ಇಸ್ಪೀಟು, ಜೂಜು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ಕಂಡ ಬಂದರೆ ಅಂತಹ ಸಮಿತಿಗಳ ವಿರುದ್ಧ ದೂರು ದಾಖಲಿಸಲಾಗುವುದು.

ಗಣೇಶ ಪ್ರತಿಷ್ಠಾಪಿಸುವ ಸ್ಥಳ ಸಾರ್ವಜನಿಕರಿಗೆ ತೊಂದರೆಯಾಗದ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಮಹಿಳೆಯರಿಗೆ ಗೌರವಿಸುವಂತಾಗಬೇಕು. ಪ್ರಚೋದನಕಾರಿ ಘೋಷಣೆ, ಹಾಡು, ಭಾಷಣ ಮಾಡುವಂತಿಲ್ಲ. ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಿಸಬೇಕು. ತಹಸೀಲ್ದಾರ್‌ ಅನುಮತಿ ಪಡೆದು, ಗಣೇಶ ಸಮಿತಿಗಳವರು ಅನುಮತಿಗಾಗಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ, ವಿದ್ಯುತ್ ಇಲಾಖೆಗಳನ್ನೊಳಗೊಂಡ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು. ಇದರಿಂದ ಗಣೇಶೋತ್ಸವ ಸಮಿತಿ ಅವರಿಗೆ ಅನುಮತಿ ಪಡೆಯಲು ಸುಲಭವಾಗುವುದು ಎಂದರು.

ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ಮಾತನಾಡಿ, ನಮಗೆ ಕಡ್ಡಾಯವಾಗಿ ಡಿ.ಜೆ ಹಚ್ಚಬೇಡಿ ಎಂದು ಆದೇಶ ನೀಡುತ್ತೀರಿ ಬೇರೆ ಗಣೇಶೋತ್ಸವದವರು ಗಣ್ಯವ್ಯಕ್ತಿಗಳಿಂದ ವಸೂಲಿತಂದು ಹಚ್ಚುತ್ತಾರೆ. ಇದರಿಂದ ಜಗಳಗಳಿಗೆ ಕಾರಣವಾಗುತ್ತದೆ. ಎಲ್ಲರಿಗೂ ಒಂದೇ ನ್ಯಾಯವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಧುರೀಣ ಯಮನೂರ ಕತ್ತಿ, ಪಾಪಣ್ಣ ಲಮಾಣಿ, ಡಿ.ಬಿ.ವಿಜಯಶಂಕರ, ದೇವರಾಜ ಕಮತಗಿ ಮುಂತಾದವರು ಮಾತನಾಡಿದರು. ಪಿಎಸ್‌ಐ ವೈ.ಎಚ್.ಪಠಾಣ ಉಪಸ್ಥಿತರಿದ್ದರು. ಸಭೆಯಲ್ಲಿ ಅಮೀನಗಡ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಭಾಗವಹಿಸಿದ್ದರು.