ಕಾನೂನು ಸಂಶೋಧನೆಯು ಕೇವಲ ಸಾಂಪ್ರದಾಯಿಕ ವಿಧಾನಗಳಿಗೆ ಸೀಮಿತವಾಗದೆ, ಅಂತರ್ ಶಿಸ್ತೀಯ ಮತ್ತು ಪ್ರಾಯೋಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ.

ಧಾರವಾಡ:

ಕಾನೂನು ಸಂಶೋಧನೆಯು ಕೇವಲ ಸಾಂಪ್ರದಾಯಿಕ ವಿಧಾನಗಳಿಗೆ ಸೀಮಿತವಾಗದೆ, ಅಂತರ್ ಶಿಸ್ತೀಯ ಮತ್ತು ಪ್ರಾಯೋಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ವಿವಿ ಕಾನೂನು ವಿಭಾಗದ ನಿವೃತ್ತ ಡೀನ್ ಪ್ರೊ. ಡಾ. ಸಿ. ರಾಜಶೇಖರ ಹೇಳಿದರು.

ಕೆಪಿಇ ಸಂಸ್ಥೆಯ ಡಾ. ಜಿ.ಎಂ. ಪಾಟೀಲ ಕಾನೂನು ಕಾಲೇಜು ಆಯೋಜಿಸಿದ್ದ ಆಧುನಿಕ ಯುಗದಲ್ಲಿ ಕಾನೂನು ಸಂಶೋಧನೆ ಸಮಸ್ಯೆಗಳು, ವಿಧಾನಗಳು ಮತ್ತು ದೃಷ್ಟಿಕೋನಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ತಜ್ಞರು ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಈ ವಿಚಾರ ಸಂಕೀರ್ಣ ಕಾನೂನು ಜ್ಞಾನದ ಹೊಸ ದಿಗಂತ ತೆರೆದಿಟ್ಟಿದೆ ಎಂದರು.

ಗೋಷ್ಠಿಯಲ್ಲಿ ಕವಿವಿ ಕಾನೂನು ವಿಭಾಗದ ಡೀನ್ ಪ್ರೊ. ವಿಶ್ವನಾಥ್ ಎಂ. ''''''''ಕಾನೂನು ಸಂಶೋಧನೆಯ ಬದಲಾಗುತ್ತಿರುವ ಮಾದರಿ: ಸಿದ್ಧಾಂತ, ವಾಸ್ತವಾಧಾರಿತ ಸಂಗತಿ ಮತ್ತು ಡಿಜಿಟಲ್ ಭವಿಷ್ಯ ಕುರಿತು ಮಾತನಾಡಿ, ಕಾನೂನು ಸಂಶೋಧನೆಯು ಕೇವಲ ಸಿದ್ಧಾಂತಗಳಿಗೆ ಸೀಮಿತವಾಗದೆ, ವಾಸ್ತವಾಧಾರಿತ ಸಂಗತಿಗಳು ಮತ್ತು ಭವಿಷ್ಯದ ಡಿಜಿಟಲ್ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳಬೇಕೆಂಬುದರ ಕುರಿತು ಮಾಹಿತಿ ನೀಡಿದರು.

2ನೇ ಗೋಷ್ಠಿಯಲ್ಲಿ ಗೋವಾದ ವಿ.ಎಂ. ಸಲ್ಗಾಂವ್ಕರ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಬಾಬುಗೌಡ ಪಾಟೀಲ, ''''''''ನ್ಯಾಯದ ಅಂತರ ಕಡಿಮೆ ಮಾಡುವುದು: ಕಾನೂನು ನೆರವು ವಿತರಣೆಯಲ್ಲಿ ಕ್ರಿಯಾ ಸಂಶೋಧನೆಯ ಅಳವಡಿಕೆ'''''''' ಕುರಿತಾದ ಪ್ರಾಯೋಗಿಕ ವಿಚಾರಗಳನ್ನು ಮಂಡಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು ತಲುಪಿಸುವಲ್ಲಿ ''''''''ಕ್ರಿಯಾ ಸಂಶೋಧನೆ'''''''' ಹೇಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಸಿದರು.

3ನೇ ಗೋಷ್ಠಿಯಲ್ಲಿ ಅಮಿಟಿ ಲಾ ಸ್ಕೂಲ್‌ನ ಪ್ರೊಫೆಸರ್ ಡಾ. ಸಂದೀಪ್ ದೇಸಾಯಿ, ''''''''ಕಾನೂನು ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿ, ಸಂಶೋಧನಾ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆಯು ಕೇವಲ ಒಂದು ಸಾಧನವಾಗಿರದೆ, ಅದು ಹೇಗೆ ಸಂಶೋಧಕರ ವಿಶ್ಲೇಷಣಾ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದರು.

ಕೆಪಿಇ ಸಂಸ್ಥೆಯ ಆಡಳಿತಾಧಿಕಾರಿ ಸಂಜೀವ ಪಾಟೀಲ, ಸಂಚಾಲಕರಾದ ಡಾ. ಶ್ವೇತಾ ದೇಶಪಾಂಡೆ, ಹಿರಿಯ ವಕೀಲರಾದ ಬಿ.ವಿ. ಸೋಮಾಪೂರ, ಡಾ. ವಿದ್ಯಾ ಶೆಟ್ಟೆಮ್ಮವರ, ಡಾ. ಮಹಾದೇವಿ ಹುಟಗಿ, ಮಹೇಶ್ ಹೆಬ್ಬಾಳ, ಪ್ರಹ್ಲಾದ್ ಕುಲಕರ್ಣಿ ಇದ್ದರು.