ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಚಿಮ್ಮನಹಳ್ಳಿಯ ಮುನೀಶ್ವರಸ್ವಾಮಿ ದಾಸೋಹ ಮಠದ ಹತ್ತಿರ ಇಂದು ಬೆಳಗಿನ ಜಾವ ಸುಮಾರು 2.5 ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಕಳೆದ ಒಂದೆರೆಡು ತಿಂಗಳಿನಿಂದ ಚಿರತೆ ಗ್ರಾಮದಲ್ಲಿ ಉಪಟಳ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಗಮನಕ್ಕೆ ತಂದು ಬೋನನ್ನು ಇರಿಸಲಾಗಿತ್ತು. ಚಿರತೆ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಚಿರತೆ ನೋಡಲು ನಾಮುಂದು ತಾಮುಂದು ಎಂದು ಮುಗಿಬಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಸುರಕ್ಷಿತವಾಗಿ ಚಿಕ್ಕನಾಯಕನಹಳ್ಳಿ ಅರಣ್ಯ ಇಲಾಖಾ ಬಳಿಗೆ ತೆಗೆದುಕೊಂಡು ಹೋದರು. ಕಾರ್ಯಾಚರಣೆಯಲ್ಲಿ ಡಿಆರ್ ಎಫ್ ವಿಜಯಕುಮಾರ್, ಗಾರ್ಡ್ ಗಳಾದ ಉಗ್ರಪ್ಪ, ವಾಚರ್ ಗಳಾದ ಗಿರೀಶ್, ಹರೀಶ್, ಗಂಗರಾಜು ಪಾಲ್ಗೊಂಡಿದ್ದರು. ಗ್ರಾಮಸ್ಥರಾದ ಶಿವಯ್ಯ, ಪುಟ್ಟರಾಜು, ವಸಂತ್ ಕುಮಾರ್, ರಂಗಸ್ವಾಮಿ ಸೇರಿದಂತೆ ಹಲವರು ಅರಣ್ಯ ಇಲಾಖಾ ಸಿಬ್ಬಂದಿಗೆ ಸಹಕರಿಸಿದರು.ಇನ್ನೊಂದು ಕಡೆ ದಾಳಿ: ತಾಲೂಕಿನ ಕೊಡಗೀಹಳ್ಳಿ ಕಲ್ಕೆರೆ ಯಲ್ಲಿ ಶುಕ್ರವಾರ ಮಧ್ಯಾಹ್ನ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ದಿಢೀರನೆ ದಾಳಿ ಮಾಡಿದ ಚಿರತೆಯೊಂದು ಮೇಯುತ್ತಿದ್ದ ಮೇಕೆಯೊಂದನ್ನು ಜನರ ಸಮ್ಮುಖವೇ ಕಚ್ಚಿಕೊಂಡು ಪರಾರಿಯಾಗಿದೆ. ಜಮೀನಿನ ಬಳಿ ಸಾಕಷ್ಟು ಮಂದಿ ತಮ್ಮ ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಶಶಿಕಲಾ ಮತ್ತು ಮುಳಕಟ್ಟಯ್ಯ ಎಂಬುವವರಿಗೆ ಈ ಮೇಕೆ ಸೇರಿದ್ದಾಗಿದೆ. ದುರಂತವೆಂದರೆ ಕಳೆದ ಎರಡ್ಮೂರು ತಿಂಗಳ ಹಿಂದೆಯೂ ಇದೇ ವ್ಯಕ್ತಿಗಳಿಗೆ ಸೇರಿದ ಮೇಕೆಯನ್ನು ಇದೇ ಸ್ಥಳದಿಂದ ಚಿರತೆ ಕಚ್ಚಿಕೊಂಡು ಹೋಗಿತ್ತು ಎಂದು ಹೇಳಲಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಚಿರತೆ ಹಿಡಿಯಲು ಇಲ್ಲೂ ಸಹ ಬೋನನ್ನು ಇಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.