ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕು, ಭಾವನೆ ಮತ್ತು ಅಸ್ಮಿತೆ. ಮಕ್ಕಳನ್ನು ಇಂಗ್ಲಿಷ್ ವ್ಯಾಮೋಹದಿಂದ ಹೊರತಂದು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು.

ಅಣ್ಣಿಗೇರಿ:

ಜಗತ್ತಿಗೆ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಟ್ಟ ಕನ್ನಡದ ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಗೆ ಪಂಪಪುರ ಎಂದು ನಾಮಕರಣ ಮಾಡಬೇಕು ಎಂದು ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಆಗ್ರಹಿಸಿದರು.

ಪಟ್ಟಣದ ನಿಂಗಮ್ಮ ಹೂಗಾರ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ನಡೆದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕು, ಭಾವನೆ ಮತ್ತು ಅಸ್ಮಿತೆ. ಮಕ್ಕಳನ್ನು ಇಂಗ್ಲಿಷ್ ವ್ಯಾಮೋಹದಿಂದ ಹೊರತಂದು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಸುಧಾ ಕೌಜಗೇರಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಹಿರಿಯ ಕವಿಗಳು, ಸಾಹಿತಿಗಳು ಹಾಗೂ ಮಹನೀಯರ ಕೊಡುಗೆ ಅಪಾರ. ಪಂಪನ ಕೃತಿಗಳನ್ನು ಸಾರೋಟಿನಲ್ಲಿ ಪ್ರದರ್ಶಿಸಿ ಕನ್ನಡ ಸಾಹಿತ್ಯದ ಸಂದೇಶ ಸಾರಿರುವುದು ಶ್ಲಾಘನೀಯ ಎಂದು ಹೇಳಿದರು.

ತಿಂಗಳೊಳಗೆ ಪಂಪ ಪ್ರತಿಷ್ಠಾಪನೆ ಸಮಿತಿ:

ಸಮ್ಮೇಳನದ ಮಹಾದ್ವಾರ ಉದ್ಘಾಟಿಸಿದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಅಣ್ಣಿಗೇರಿಯಲ್ಲಿ ಪಂಪ ಪ್ರತಿಷ್ಠಾಪನೆಗೆ ಈಗಾಗಲೇ ಸರ್ಕಾರದ ಆದೇಶವಿದೆ. ತಿಂಗಳೊಳಗೆ ಸಮಿತಿ ರಚಿಸಿ, ಪಂಪ ಪ್ರತಿಷ್ಠಾಪನೆ ಕಾರ್ಯವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. "ನಮ್ಮ ನಡೆ ಕನ್ನಡದ ಕಡೆ " ಘೋಷಣೆಯೊಂದಿಗೆ ಶ್ರೀ ಅಮೃತೇಶ್ವರ ಬಯಲಿನಿಂದ ಅಗಸಿಓಣಿ ಮಾರ್ಗವಾಗಿ ಬಸ್‌ ನಿಲ್ದಾಣ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಶ್ರೀ ನಿಂಗಮ್ಮ ಎಸ್. ಹೂಗಾರ ಭವ್ಯ ವೇದಿಕೆ ವರೆಗೆ ಕನ್ನಡಾಭಿಮಾನಿಗಳ ಬೃಹತ್ ಮೆರವಣಿಗೆ ನಡೆಯಿತು. ಸಂಜೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರೊ. ಎಸ್.ಎಸ್. ಹರ್ಲಾಪುರ, ವಿಪ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ತಾಲೂಕು ಅಧ್ಯಕ್ಷ ಅನ್ವರ್ ಹುಬ್ಬಳ್ಳಿ, ಸಾಹಿತಿಗಳಾದ ಅಮೃತೇಶ ತಂಡರ, ಎಂ.ಎಸ್. ಪೂಜಾರ, ಪಾಂಡುರಂಗ ಓಸೇಕಾರ, ಚಂಬಣ್ಣ ಸುರಕೋಡ, ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳೆಹಾರ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರು, ಪ್ರಕಾಶ ಅಂಗಡಿ, ಹಸನಸಾಬ ಗೂಡುನಾಯ್ಕರ್, ಶಿವಶಂಕರ ಕಲ್ಲೂರು, ದೇವರಾಜ ನಾವಳ್ಳಿ ಸೇರಿ ಹಲವರಿದ್ದರು.