ತಜ್ಞವೈದ್ಯರ ತಂಡದಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಂಗವೈಕಲ್ಯ ಪ್ರಕಾರ ಅದರ ಸ್ವರೂಪ ಹಾಗೂ ಪ್ರಮಾಣವನ್ನು ಗುರುತಿಸಿ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ನಿರ್ಧರಿಸಲು ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಗದಗ: ವಿಶೇಷ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರವು ವಿಶೇಷ ಚೇತನರ ಉಚಿತ ವೈದ್ಯಕೀಯ ತಪಾಸಣೆ ನಡೆಸಿ ಸಾಧನಾ ಸಲಕರಣೆಗಳನ್ನು ಅವರಿಗೆ ಒದಗಿಸಿ, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲರೂ ಶ್ರಮಿಸಬೇಕು ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ತಿಳಿಸಿದರು.ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದಿಂದ ಜರುಗಿದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಜ್ಞವೈದ್ಯರ ತಂಡದಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಂಗವೈಕಲ್ಯ ಪ್ರಕಾರ ಅದರ ಸ್ವರೂಪ ಹಾಗೂ ಪ್ರಮಾಣವನ್ನು ಗುರುತಿಸಿ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ನಿರ್ಧರಿಸಲು ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಎಎಲ್ಎಂಸಿಒ ಸಂಸ್ಥೆಯವರು ಅಗತ್ಯವಿರುವ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸಾಧನ, ಸಲಕರಣೆಗಳನ್ನು ವಿತರಿಸುವರು. ಇದರ ಸದುಪಯೋಗ ಅಗತ್ಯವುಳ್ಳವರು ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದ ಎಪಿಸಿಒ ಶಿವಕುಮಾರ ಕುರಿ ಮಾತನಾಡಿ, ಅಂಗವೈಕಲ್ಯತೆ ಶಾಪವಲ್ಲ. ಸಾಧನೆ ಮಾಡಲು ವಿಶೇಷ ಅಗತ್ಯವುಳ್ಳವರಿಗೆ ಪ್ರೋತ್ಸಾಹ ಹಾಗೂ ಸಹಕಾರ ಬೇಕಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದರು.ಸಮನ್ವಯ ಕೇಂದ್ರದ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ಅಂಗವಿಕಲರು ಸಾಧನೆ ಮಾಡಬಲ್ಲರು. ಅವರಿಗೆ ಎಲ್ಲ ರೀತಿಯ ಸಹಕಾರ ಅವಶ್ಯಕತೆ ಇದೆ. ತಂದೆ- ತಾಯಿಯಂದಿರು ಇಂತಹ ಮಕ್ಕಳ ಬಗೆಗೆ ಚಿಂತಿಸದೇ ಮುಖ್ಯವಾಹಿನಿಗೆ ತರುವತ್ತ ಗಮನ ಹರಿಸಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಕಲಚೇತನರು ಸಾಧನೆಯ ಹಾದಿಯಲ್ಲಿ ಸಾಗಿದವರು. ಗೃಹ ಆಧರಿತ ಮಕ್ಕಳಿಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಆದಷ್ಟು ಶಿಕ್ಷಣದ ಕಡೆಗೆ ಮಕ್ಕಳು ಬರುವಂತೆ ಪ್ರೇರಣೆ ನೀಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಂತೆ ನಾವೆಲ್ಲರೂ ಅವರಿಗೆ ಆಸರೆಯಾಗಬೇಕು ಎಂದರು.ಈ ವೇಳೆ ಎಎಲ್ಐಎಂಸಿಒ ಸಂಸ್ಥೆಯ ನುರಿತ ವೈದ್ಯರು, ಮುಖ್ಯೋಪಾಧ್ಯಾಯ ಎಸ್.ಜೆ. ನಮಾಜಿ ಸೇರಿದಂತೆ ಇತರರು ಇದ್ದರು. ಸುನೀತಾ ತಿಮ್ಮನಗೌಡ್ರ, ಕಟಗಿ ಪ್ರಾರ್ಥಿಸಿದರು. ಸಂಪನ್ಮೂಲ ವ್ಯಕ್ತಿ ಇ.ಡಿ. ಹುಗ್ಗೇನವರ ಸ್ವಾಗತಿಸಿದರು. ಶ್ಯಾಮ ಲಾಂಡೆ ನಿರೂಪಿಸಿದರು. ಎಸ್.ಸಿ. ಚಳಗೇರಿ ವಂದಿಸಿದರು.