ಡೆಂಘೀಗೆ ಬಲಿಯಾದ ಬಾಲಕಿ ಕುಟುಂಬಕ್ಕೆ ಪರಿಹಾರ ಘೋಷಿಸಲಿ: ರಮೇಶ ಕತ್ತಿ

| Published : Jul 13 2024, 01:42 AM IST

ಸಾರಾಂಶ

ಡೆಂಘೀಗೆ ಬಲಿಯಾದ ಸಂಕೇಶ್ವರದ ಬಾಲಕಿ ಮನೆಗೆ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಡೆಂಘೀ ಸೋಂಕಿತರಿಂದ ಹೆಚ್ಚಿನ ಹಣ ಪಡೆಯದೇ ಸೇವೆ ನೀಡಬೇಕು. ಅಲ್ಲದೆ, ಸರ್ಕಾರ ಈ ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ಘೋಷಿಸಬೇಕೆಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಆಗ್ರಹಿಸಿದರು.ಶಂಕಿತ ಡೆಂಘೀಗೆ ಬಲಿಯಾದ ಪಟ್ಟಣದ ಅನಂತ ವಿದ್ಯಾನಗರದ 11 ವರ್ಷದ ಬಾಲಕಿ ಶ್ರೇಯಾ ಧವಡೆತೆ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಡೆಂಘೀ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದರು.

ಸಾರ್ವಜನಿಕರ ಆರೋಗ್ಯ ರಕ್ಷಣೆ ಸರ್ಕಾರದ ಹೊಣೆಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ, ಸ್ವಚ್ಛತೆ ಬಗೆಗೆ ಗಮನ ಹರಿಸುವುದರ ಜೊತೆಗೆ ರೋಗದ ಕುರಿತಾಗಿ ಎಚ್ಚರವಹಿಸಬೇಕು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆಮನೆಗೂ ತೆರಳಿ ಪ್ರತಿಯೊಬ್ಬರ ಆರೋಗ್ಯದ ಕುರಿತು ಸಮಗ್ರ ಮಾಹಿತಿ ಪಡೆಯಬೇಕು. ಡೆಂಘೀನಿಂದ ಆಗಬಹುದಾದ ಸಾವು ತಡೆಗಟ್ಟುವಲ್ಲಿ ಜಿಲ್ಲಾಡಳಿತಗಮನ ಹರಿಸಬೇಕಿದ್ದು, ಕೋವಿಡ್ ಮಾದರಿಯಲ್ಲಿ ರೋಗ ತಡೆಗಟ್ಟಲು ಕಾರ್ಯೋನ್ಮುಖವಾಗಬೇಕಿದೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಪುರಸಭೆ ಸದಸ್ಯ ಶಿವಾನಂದ ಮುಡಶಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಪಾಟೀಲ, ಯುವ ಧುರೀಣ ರೋಹನ್ ನೇಸರಿ, ಆನಂದ ಸಂಸುದ್ದಿ, ಆರೋಗ್ಯ ಅಧಿಕಾರಿಗಳು ಇದ್ದರು.