ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಉದ್ಯಮಕ್ಷೇತ್ರ ಬಯಸುವುದು ನವೀನ ಕಲ್ಪನೆಗಳು, ತಂತ್ರಜ್ಞಾನದ ಸಮ್ಮಿಲನದೊಂದಿಗೆ ಮಾರುಕಟ್ಟೆಯ ಪ್ರವೃತ್ತಿಗಳಿಗನುಗುಣವಾದ ಉತ್ಪನ್ನಗಳು ಹಾಗೂ ಸ್ಥಿರತೆ: ಈ ಎಲ್ಲದರ ಪರಿಚಯವನ್ನು ಸಂಪರ್ಕಿಸಿ ಗ್ರಾಮೀಣ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಉದ್ಯೋಗಶೀಲರನ್ನಾಗಿ ಮಾಡಲು ಸಾಧ್ಯವಿರುವುದು ವಿಶ್ವವಿದ್ಯಾನಿಲಯಗಳಿಗೆ ಎಂದು ಉದ್ಯಮಿ ಎಚ್.ಜಿ. ಚಂದ್ರಶೇಖರ್ ಹೇಳಿದರು.ತುಮಕೂರು ವಿವಿ ಪಿಜಿ ಡಿಪ್ಲೋಮ ಇನ್ ಕೊಕೊನಟ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಅಂಡ್ ಪ್ರೋಸೆಸ್ಸಿಂಗ್ ವಿಭಾಗ ವಿವಿಯ ಜೈವಿಕ ತಂತ್ರಜ್ಞಾನ ವಿಭಾಗ, ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ನಾವೀನ್ಯತೆಯ ಸವಾಲುಗಳಡಿಯಲ್ಲಿ ‘ತೆಂಗಿನ ಮೌಲ್ಯವರ್ಧನೆಗಾಗಿ ಸಾವಯವ ಕೃಷಿ, ಆಹಾರ ಮತ್ತು ಪೌಷ್ಠಿಕಾಂಶಕ್ಕಾಗಿ ಉತ್ತಮ ಪರಿಹಾರಗಳು’ ಕುರಿತ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಹತ್ತಾರು ನವೀನ ವಿಷಯಗಳಿಗೆ ಹೊಸದೊಂದು ಶೈಕ್ಷಣಿಕ ಬಾಗಿಲನ್ನುತೆರೆದಿರುವ ತುಮಕೂರು ವಿವಿಯು ಅಧ್ಯಯನ, ಸಂಶೋಧನೆಗಳಿಗೆ ಗರಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಬಿಸಿಯೂಟ ಯೋಜನೆ, ಸಂಶೋಧನೆಗಾಗಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಪರಸ್ಪರ ವಿನಿಮಯ ಆಧಾರಿತ ಪದ್ಧತಿ ಅನುಸರಿಸಲು ಮುಂದಾಗಿರುವುದು ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ವಿಷಯವಾಗಿದೆ ಎಂದರು.ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಅವಕಾಶಗಳು ಅರಸಿ ಬಂದಾಗ ಧನಾತ್ಮಕವಾಗಿ ಅವುಗಳನ್ನು ಸ್ವೀಕರಿಸಬೇಕು. ಅವುಗಳ ಉಪಯೋಗವನ್ನು ಸರ್ವತೋಮುಖವಾಗಿ ಯೋಚಿಸಿ ಯೋಜಿಸಬೇಕು. ಕೈಗಾರಿಕೆಗಳು ನವೀನ ಆಲೋಚನೆಗಳನ್ನು ನಿರೀಕ್ಷಿಸುತ್ತವೆ. ಪ್ರಾದೇಶಿಕ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಮತ್ತು ಅದನ್ನು ಮಾರುಕಟ್ಟೆಯಲ್ಲಿ ಅಳವಡಿಸಿಕೊಳ್ಳುವ ಚಾಣಾಕ್ಷತನವನ್ನು ಕಲಿಸಬೇಕು ಎಂದು ತಿಳಿಸಿದರು.
ವಾಣಿಜ್ಯೋದ್ಯಮಿ ಸುರೇಂದ್ರ ಷಾ ಮಾತನಾಡಿ, ಕೃಷಿಯನ್ನು ಆಧಾರವಾಗಿ ಬಳಸಿಕೊಂಡು ದೇಶವು 5 ಟ್ರಿಲಿಯನ್ ಆರ್ಥಿಕತೆಯನ್ನು ತಲುಪಬೇಕು. ನಾವು ಪ್ರಪಂಚದಾದ್ಯಂತ ತೆಂಗಿನಕಾಯಿಯನ್ನು ರಫ್ತು ಮಾಡುತ್ತೇವೆ. ತೆಂಗಿನ ಉತ್ಪನ್ನಗಳಿಂದ ಆದಾಯ ಹೆಚ್ಚಿದೆ. ತೆಂಗು ಕ್ಷೇತ್ರದಲ್ಲಿ ಯಶಸ್ವಿಯಾಗಲು ಉತ್ತಮ ತಂತ್ರಜ್ಞಾನದ ಆಲೋಚನೆಗಳೊಂದಿಗೆ ಹೊರಬರಬೇಕು ಎಂದರು.ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್ ತುಮಕೂರು ಶಾಖೆಯನ್ನು ಉದ್ಘಾಟಿಸಲಾಯಿತು. ಬೆಂಗಳೂರಿನ ಆಲ್ಟೈಮ್ ಮೇಟೀರಿಯ ಲ್ಸ್ಇನೋವೇಶನ್ಸ್ ಸಂಶೋಧನೆ ಮತ್ತು ಅಭಿವೃದ್ಧಿಯ ಉಪಾಧ್ಯಾಕ್ಷ ಡಾ. ಹರ್ಷದ್ ವೇಲಂಕರ್, ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್ ಜಾಗತಿಕ ನಿರ್ದೇಶಕ ಆನಂದ್ ಕಣ್ಣನ್ ಉಪಸ್ಥಿತರಿದ್ದರು.
ವಿವಿ ಜೈವಿಕತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶರತ್ಚಂದ್ರ ಆರ್.ಜಿ. ನಿರೂಪಿಸಿದರು. ವಿವಿ ಉಪಕುಲಸಚಿವೆ ಡಾ. ಮಂಗಳಾ ಗೌರಿ ಎಂ. ವಂದಿಸಿದರು.