ಖುರಾನ್ ಓದಿದ ಪ್ರತಿಯೊಬ್ಬರೂ ಸಹ ಇಂತಹ ತಾತ್ವಿಕ ಹೋರಾಟದ ಭಾಗವಾಗಬೇಕು
ಕೊಪ್ಪಳ: ಜಗತ್ತಿನ ಪ್ರತಿಯೊಂದು ಸೃಷ್ಟಿಯೂ ಭಗವಂತನ ಮಹಿಮೆ, ಅಲ್ಲಾಹನ ಸೃಷ್ಟಿಯಾದ ಈ ಪರಿಸರ, ಪಕ್ಷಿ, ಪ್ರಾಣಿ ಮತ್ತು ಮನುಷ್ಯನ ಸೃಷ್ಟಿ ಕೆಡಿಸಲು ಯಾರಿಗೂ ಹಕ್ಕಿಲ್ಲ ಎಂದು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಸೈಯದ್ ಹಿದಾಯತ್ ಅಲಿ ಎಂದು ಪ್ರತಿಪಾದಿಸಿದರು. ನಗರದ ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ,ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ್ ಸುಮಿ,ಎಕ್ಸ್ ಇಂಡಿಯಾ, ತನುಷ್, ದೃವದೇಶ ಸೇರಿದಂತೆ ಅನೇಕ ಪರಿಸರ ಮಾರಕ ಕಾರ್ಖಾನೆ ವಿರೋಧಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹದ 72 ನೇ ದಿನ ಜಮಾಅತೆ ಇಸ್ಲಾಮೀ ಹಿಂದ್ ಮತ್ತು ಮಹಿಳಾ ಘಟಕ ಮೂಲಕ ಬೆಂಬಲ ನೀಡಿ ಮಾತನಾಡಿದ ಅವರು,
ಖುರಾನ್ ಓದಿದ ಪ್ರತಿಯೊಬ್ಬರೂ ಸಹ ಇಂತಹ ತಾತ್ವಿಕ ಹೋರಾಟದ ಭಾಗವಾಗಬೇಕು ಎಂದು ಬಯಸುತ್ತೇವೆ, ಧರ್ಮಾತೀತ ಮತ್ತು ಪ್ರಾಮಾಣಿಕ ಹೋರಾಟಕ್ಕೆ ಜೊತೆಯಾಗಿದ್ದಕ್ಕೆ ಖುಷಿ ಇದೆ, ಮುಂದೆಯೂ ಸಹ ಅಗತ್ಯ ಬಿದ್ದಾಗ ಹೋರಾಟಕ್ಕೆ ಬರುವ ಜತೆಗೆ ರಾಜ್ಯ ಮಟ್ಟದ ನಾಯಕರನ್ನು ಕರೆಸುತ್ತೇವೆ ಎಂದರು.ನಗರಸಭೆ ಮಾಜಿ ಸದಸ್ಯೆ ಸಬಿಯಾ ಪಟೇಲ್ ಮಾತನಾಡಿ, ಕಳೆದ 20 ವರ್ಷಗಳಿಂದ ಇಲ್ಲಿನ ತಲಾ ಆದಾಯ ಹೆಚ್ಚಳವಾಗಿಲ್ಲ, ಕಾರ್ಖಾನೆಯಿಂದ ಇಲ್ಲಿನ ಜನರ ಅಭಿವೃದ್ಧಿ ಆಗಿರುವದಕ್ಕೆ ಯಾವುದೇ ಆಧಾರ ಇಲ್ಲ. ಗವಿಶ್ರೀಗಳು ಜನರ ನೋವಿಗೆ ಧ್ವನಿಯಾಗಿ ಮಾಡಿದ ಹೋರಾಟಕ್ಕೆ ಬೆಲೆ ಕೊಡದಿದ್ದರೆ ಕಂಪನಿಗಳು ಮತ್ತು ಜನಪ್ರತಿನಿಧಿಗಳು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂಜಿನಿಯರ್ ಮಹ್ಮದ್ ಖಲೀಮುಲ್ಲಾ ಖಾನ್ ಮಾತನಾಡಿ, ಜನರ ಆರೋಗ್ಯ ಮತ್ತು ಬದುಕನ್ನು ಕಸಿದುಕೊಳ್ಳಲು ಭೂಮಿಯ ಮೇಲೆ ಯಾರಿಗೂ ಅಧಿಕಾರವಿಲ್ಲ, ಅದನ್ನು ಮಾಡಲು ಹೊರಟರೆ ನಿಸರ್ಗವೇ ಅದಕ್ಕೆ ಉತ್ತರ ಕೊಡುತ್ತದೆ ಎಲ್ಲರೂ ಹೋರಾಟಕ್ಕೆ ಸಮರೋಪಾದಿಯಲ್ಲಿ ಬೆಂಬಲ ನೀಡಲು ಮನವಿ ಮಾಡಿದರು.ಮಹಿಳಾ ಹೋರಾಟಗಾರ್ತಿ ಸಲೀಮಾ ಜಾನ್ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ತೀವ್ರವಾಗಿ ಕುಸಿಯುತ್ತಿದೆ, ಕಂಪನಿ ಸುಳ್ಳು ವರದಿ ಮತ್ತು ದಾಖಲೆ ಸೃಷ್ಟಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಗೊಳ್ಳಬೇಕು ನಾವು ಇಡೀ ಲಕ್ಷ ಜನರು ಸೇರಿ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಎಂ.ಡಿ.ಕಲೀಮುಲ್ಲಾ ಖಾನ್, ಎಂ.ಡಿ. ಅಸಾದುಲ್ಲಾ ಖಾನ್, ಶೌಕತ್ ಅಲಿ ನಾಗನೂರ, ಅಹ್ಮದ್ ಖಾನ್, ರಹೆಮತ್ ಹುಸೇನ್, ಮೊಹಮ್ಮದ್ ಅಯಾಜ್, ಎಂ.ಡಿ. ಫಾರೂಕ್ ಹುಸೇನ್, ಅಸ್ಗರ್ ಖಾನ್, ಫೌಜಿಯಾ ಜೋಹರ್, ಸಬಿಯಾ ಬೇಗಂ, ಸೈಯದಾ ನಜ್ಮೀನ್, ಉಮ್ಮೇ ಸಲ್ಮಾ, ಮೌಲಾಹುಸೇನ್ ಕಮ್ಮಾರ, ಮಂಜೂರ್ ಅಹ್ಮದ್, ಅಬ್ದುಲ್ ರಶೀದ್, ಎಂ.ಡಿ. ತಖೀವುದ್ದೀನ್ ಭಾಗವಹಿಸಿದರು.ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ. ಎಂ. ಬಡಿಗೇರ್, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ರಾಜೂರು, ಜಿ.ಎಸ್. ಕಡೇಮನಿ, ಕನಕಮೂರ್ತಿ ಛಲವಾದಿ, ಶಂಭುಲಿಂಗಪ್ಪ ಹರಗೇರಿ, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ರಾಮಣ್ಣ ಬಡಿಗೇರ್ ಇದ್ದರು.