ಸಾರಾಂಶ
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬಳ್ಳಾರಿಪ್ರತಿಯೊಬ್ಬರೂ ಸ್ವ ಉದ್ಯೋಗ, ಸ್ವಾವಲಂಬನೆ ಮತ್ತು ಸ್ವ-ದುಡಿಮೆಗಾಗಿ ಉದ್ಯೋಗ ಸೃಷ್ಟಿಸುವಂತರಾಗಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಕರೆ ನೀಡಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬಳ್ಳಾರಿ ಚೇಂಬರ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲ್ಯಾಭಿವೃದ್ಧಿ ಇಲಾಖೆ, ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯಡಿ ತರಬೇತಿ ಪಡೆದಿರುವ ಟ್ಯಾಲಿ ಫ್ರೈಮ್ ಮತ್ತು ಹೊಟೇಲ್ ಮ್ಯಾನೇಜ್ಮೆಂಟ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಯುವಕರು ದೇಶದ ಭವಿಷ್ಯ. ಮುಕ್ತ ಮತ್ತು ತೆರೆದ ಮನಸ್ಸಿನಿಂದ ಹೊಸತನಕ್ಕೆ ದೊಡ್ಡ ದೊಡ್ಡ ಕನಸು ಕಾಣಬೇಕು. ಅದನ್ನು ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನಿಸಿ ಮುಂದಿನ ಪೀಳಿಗೆಗೆ ಆದರ್ಶ, ಮಾರ್ಗದರ್ಶಕರು ಮತ್ತು ಪ್ರೇರಣೆ ನೀಡುವಂತಾಗಬೇಕು ಎಂದರು.
ಈ ಹಿಂದೆ ಮಾಹಿತಿ ಕೊರತೆ ಸಾಕಷ್ಟಿತ್ತು. ಇಂಟರ್ನೆಟ್ ಮತ್ತು ಸ್ಮಾರ್ಟ್ ಮೊಬೈಲ್ಗಳು ಮಾಹಿತಿಯ ಕೊರತೆ ನೀಗಿಸಿದ್ದು, ಮೆಟ್ರೋ ಸಿಟಿಯ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲಾ ಮಾಹಿತಿ, ಜ್ಞಾನ ಹಳ್ಳಿಯ ವಿದ್ಯಾರ್ಥಿಗಳಿಗೂ ಸುಲಭವಾಗಿ ಸಿಗುತ್ತಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಟ್ಯಾಲಿ, ಬೇಸಿಕ್ ಕಂಪ್ಯೂಟರ್ಸ್ನಲ್ಲಿ 200 ಅಭ್ಯರ್ಥಿಗಳು, ಹೊಟೇಲ್ ಮ್ಯಾನೇಜ್ ಮೆಂಟ್ನಲ್ಲಿ 50 ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಆಸಕ್ತರಿಗೆ ಅಪ್ರೆಂಟಿಶಿಪ್ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಮಾತನಾಡಿ, ಹೊಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ತರಬೇತಿ ಪಡೆದಲ್ಲಿ `ನಿರುದ್ಯೋಗ’ ಸಮಸ್ಯೆಯೂ ಇರುವುದಿಲ್ಲ, ಈ ಕ್ಷೇತ್ರದಲ್ಲಿ ಅವಕಾಶಗಳಿಗೆ ಕೊನೆಯಿಲ್ಲ ಎಂದರು.ಟ್ಯಾಕ್ಸೇಷನ್ ಕಮಿಟಿ ಚೇರ್ಮನ್ ಸಿಎ ಕೆ.ರಾಜಶೇಖರ್, ಭವಿಷ್ಯದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಬೇಡಿಕೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಕೇವಲ ಕ್ಲಾಸ್ರೂಂಗೆ ಸೀಮಿತಗೊಳ್ಳದೇ ವೃತ್ತಿಪರ ಕೋರ್ಸ್ ಗಳಿಗೆ ಸೇರಿ ಆಯಾ ವೃತ್ತಿಯ ಕೌಶಲ್ಯ, ನೈಪುಣ್ಯತೆಯನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ, ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಚೇಂಬರ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ನಾಗಳ್ಳಿ ರಮೇಶ್, ಕೆ.ನಾಗರಾಜ್ ಹಾಗೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.