ಸಾರಾಂಶ
- ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ರಾಜಶೇಖರಪ್ಪ ಸಲಹೆ
- - -ಚನ್ನಗಿರಿ: ಮುಂದಿನ ಪೀಳಿಗೆ ಆರೋಗ್ಯವಂತರಾಗಿ ಬದುಕಬೇಕಾದರೆ ರೈತರು ಬೆಳೆಯುವ ಆಹಾರ ಪದಾರ್ಥಗಳಲ್ಲಿ ಸತ್ವಗಳು ಇರಬೇಕು. ಅದಕ್ಕಾಗಿ ಸಾವಯವ ಕೃಷಿಯತ್ತ ಸಾಗಬೇಕಾಗಿದೆ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರಪ್ಪ ಹೇಳಿದರು. ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಕಾಡಜ್ಜಿಯ ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ಯೋಜನೆಯಡಿ ತರಬೇತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತರು ಸಾವಯವ ಕೃಷಿ ಅನುಸರಿಸಬೇಕು ಎಂದು ಹೇಳುತ್ತಿದ್ದರೂ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಉಂಟಾಗುತ್ತಿವೆ. ಆರೋಗ್ಯ ಸಮಾಜ ನಿರ್ಮಾಣ ಆಗಬೇಕಾದರೆ ಪ್ರಕೃತಿ ಆಧಾರಿತವಾದ ಬೀಜಾಮೃತ, ಜೀವಾಮೃತ ಮತ್ತು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಜಮೀನುಗಳಿಗೆ ಹಾಕಿ ಬೆಳೆ ಬೆಳೆಯಬೇಕು ಎಂದು ತಿಳಿಸಿದರು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಅನುರಾಧ ಮಾತನಾಡಿ, ರೈತರು ತಮ್ಮ ಜಮೀನುಗಳಲ್ಲಿ ಫಲವತ್ತತೆ ಹೆಚ್ಚಿಸಿಕೊಳ್ಳುವ ಮತ್ತು ಮಣ್ಣು ಪರೀಕ್ಷೆಗಳನ್ನು ಮಾಡಿ ಅದಕ್ಕೆ ಬೇಕಾಗುವಂತಹ ಪೋಷಕಾಂಶಗಳ ಮಿಶ್ರಣ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ದುರುಗಪ್ಪ ಮಾತನಾಡಿ, ಮೆಕ್ಕೆಜೋಳದ ಬೆಳೆಯಲ್ಲಿ ಕಳೆ ನಿರ್ವಹಣೆ, ಕೀಟ ಮತ್ತು ರೋಗಬಾಧೆಗಳ ನಿರ್ವಹಣೆಗಳು ಕುರಿತು ಹೊಸ ತಾಂತ್ರಿಕತೆ ಬಗ್ಗೆ ರೈತರಿಗೆ ಸಮಗ್ರವಾಗಿ ತಿಳಿಸಿದರು.ಕೃಷಿ ಅಧಿಕಾರಿ ಮೇತಾಬ್ ಆಲಿ ಮಾತನಾಡಿ, ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಲ್ಲಿ ಹೊದಿಗೆರೆ ಗ್ರಾಮವನ್ನು ಆಯ್ಕೆ ಮಾಡಿದ್ದು, 125 ಫಲಾನುಭವಿಗಳು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಉತ್ತೇಜನ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಮಲ್ಲಿಕಾರ್ಜುನ್, ಸಹಕಾರ ಸಂಘದ ಅಧ್ಯಕ್ಷ ಶೈಲೇಂದ್ರ, ಕೃಷಿ ಅಧಿಕಾರಿ ಕೇಶವಮೂರ್ತಿ, ಕೃಷಿ ಸಖಿಯರಾದ ರಾಜೇಶ್ವರಿ, ಸರಸ್ವತಿ, ವಿಜಯಮ್ಮ, ರೈತರು ಭಾಗವಹಿಸಿದ್ದರು.- - -
-11ಕೆಸಿಎನ್ಜಿ3:ಸಮಾರಂಭದಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರಪ್ಪ ಮಾತನಾಡಿದರು.