ಪತ್ರಿಕಾ ದಿನಾಚರಣೆ ಮತ್ತು ಬಾರ್ಡೋಲಿ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಅಂಕೋಲಾಪತ್ರಿಕಾ ಮಾದ್ಯಮವು ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳು ಹಾಗೂ ತ್ವರಿತ ಮಾಹಿತಿಯ ಸ್ವರ್ಧೆಯಂತಹ ಅನೇಕ ಸವಾಲು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಕರ್ತರು ಸತ್ಯನಿಷ್ಠೆಯೊಂದಿಗೆ ಸೃಜನಶೀಲತೆಯನ್ನು ತಮ್ಮ ವರದಿಗಾರಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಓದುಗರ ವಿಶ್ವಾಸವನ್ನು ಗಳಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ತಿಳಿಸಿದರು.

ಪಟ್ಟಣದ ಕೆಎಲ್ಇ ಕಾಲೇಜಿನ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದವರು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಬಾರ್ಡೋಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರು ಯಾವುದೇ ವರದಿಯನ್ನು ಸಿದ್ಧಪಡಿಸುವ ಮುನ್ನ ಆತುರಕ್ಕೆ ಒಳಗಾಗದೇ ಅದರಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಸತ್ಯಾಸತ್ಯತೆ, ವಿಶ್ವಾಸಾರ್ಹತೆ ಮತ್ತು ವಾಸ್ತವಾಂಶಗಳನ್ನು ಸಮಗ್ರವಾಗಿ ಪರಿಸೀಲಿಸಿ ದೃಢಿಕರಿಸಬೇಬೇಕಿದೆ ಎಂದರು.

ಸಹಕಾರಿ ಧುರೀಣ ಜಾರ್ಜ ಫರ್ನಾಂಡೀಸ್ ಮಾತನಾಡಿ, ಕರ್ನಾಟಕದ ಬಾರ್ಡೋಲಿ ಎಂದು ಖ್ಯಾತಿ ಪಡೆದ ಅಂಕೋಲೆ ಹೋರಾಟಗಳ ನೆಲವಾಗಿರುವುದರ ಜೊತೆಗೆ ಬಹುಮುಖ ಪ್ರತಿಭೆಗಳನ್ನು ಪೋಷಿಶಿ, ಪತ್ರಿಕಾರಂಗದಲ್ಲಿಯೂ ಅಳಿಸಲಾಗದ ಛಾಪು ಮೂಡಿಸಿದ ಮಹನೀಯರನ್ನು ನೀಡಿದ ಹೆಮ್ಮೆಯ ನಾಡಾಗಿದೆ ಎಂದರು.


ಖ್ಯಾತ ನಾಟಿ ವೈದ್ಯ ಹನುಮಂತ ಗೌಡ ಪತ್ರಕರ್ತರ ಕಾರ್ಡ ಬಿಡುಗಡೆಗೊಳಿಸಿದರು. ಕೆಎಲ್ಇ ಡಿಇಡಿ ಕಾಲೇಜಿನ ಪ್ರಾಚಾರ್ಯೆ ಸರೋಜನಿ ಹಾರವಾಡೇಕರ, ಜೈಹಿಂದ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪದ್ಮನಾಭ ಪ್ರಭು, ಕೆನರಾ ವೆಲ್ಫೆರ್ ಟ್ರಸ್ಟ್ ಆಡಳಿತಾಧಿಕಾರಿ ಆರ್.ವಿ. ಕೇಣಿ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ಅರುಣ ಶೆಟ್ಟಿ ಸ್ವಾಗತಿಸಿದರು. ನಾಗರಾಜ ಜಾಂಬಳೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಭಾಸ ಕಾರೇಬೈಲ್ ನಿರೂಪಿಸಿದರು. ಉಪಾಧ್ಯಕ್ಷ ವಾಸುದೇವ ಗುನಗಾ ವಂದಿಸಿದರು. ಸಂಘದ ಕೆ. ರಮೇಶ, ಅಕ್ಷಯ ನಾಯ್ಕ, ಮೋಹನ ದುರ್ಗೇಕರ, ದಿನಕರ ನಾಯ್ಕ, ನಿತೇಶ ಕೇಣಿ, ಅಜಿತ ನಾಯಕ, ಅನುಪ ಗುನಗಾ ಉಪಸ್ಥಿತರಿದ್ದರು.