ಸಾಹಿತ್ಯ ವಿಮರ್ಶೆಗೆ ಮಾನದಂಡಗಳು ಅನುಸರಿಸಿದಾಗ ಉತ್ಕೃಷ್ಟ ವಿಮರ್ಶೆಯಾಗುತ್ತದೆ.

ಹೊಸಪೇಟೆ: ಸಾಹಿತ್ಯ ವಿಮರ್ಶೆಗೆ ಮಾನದಂಡಗಳು ಅನುಸರಿಸಿದಾಗ ಉತ್ಕೃಷ್ಟ ವಿಮರ್ಶೆಯಾಗುತ್ತದೆ. ಸಾಹಿತ್ಯವನ್ನು ವಿವಿಧ ಮಗ್ಗುಲಲ್ಲಿ ವಿಭಿನ್ನ ದೃಷ್ಟಿಯಿಂದ ನೋಡಿದಾಗ ಅದರಲ್ಲಿ ಹುದುಗಿರುವ ಸತ್ಯ ಬಯಲಿಗೆಳೆಯಲು ಸಾಧ್ಯವಾಗುತ್ತದೆ ಎಂದು ಡಾ.ದಯಾನಂದ ಕಿನ್ನಾಳ್ ಹೇಳಿದರು.ನಗರದ ನಿವೃತ್ತ ವೈದ್ಯೆ, ಸಾಹಿತಿ ಡಾ.ಸುಲೋಚನಾ ಅವರ ಮನೆಯಲ್ಲಿ ನಡೆದ ವಿಜಯನಗರ ಕನ್ನಡದ ಕಟ್ಟೆ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯದ ಭಾಷೆ, ತಂತ್ರಗಾರಿಕೆ, ವಸ್ತು, ವಿಷಯ, ಸ್ವರೂಪ, ನಿರೂಪಣಾ ಶೈಲಿ ಇವೆಲ್ಲವೂ ಕತೆಗಾರರು ಹೇಗೆ ಬಳಸಿಕೊಂಡಿದ್ದಾರೆಂಬುದು ವಿಮರ್ಶಕರು ಗುರುತಿಸಬೇಕಾಗುತ್ತದೆ. ವಿಮರ್ಶೆ ಆರೋಗ್ಯಪೂರ್ಣವಾಗಿರಬೇಕು. ವಿಮರ್ಶಕರು ಸುಖಕರವಾದ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದರು.

ಡಾ.ಸುಲೋಚನಾ ಬರೆದ ''''''''ಅತ್ರಿ ಮತ್ತು ಇತರ ಕಥೆಗಳು'''''''' ಎಂಬ ಪುಸ್ತಕದಲ್ಲಿರುವ ಹತ್ತು ಕತೆಗಳನ್ನು ವಿಮರ್ಶೆಗೊಳಪಡಿಸಲಾಗಿತ್ತು. ಅತ್ರಿ (ಚಂದ್ರಶೇಖರ ರೋಣದಮಠ), ಒಂದು ಕಣ್ಣೀರಿನ ಕತೆ (ಜಿ.ಯರಿಸ್ವಾಮಿ), ಕರ್ಪಿ ಶಿಲ್ಪಿ (ಡಾ.ಚನ್ನಪ್ಪ ಕಿಚಡಿ), ಉಷೆಯೆಡೆಗೆ (ದೀಪಕ್ ಬಿಳ್ಳೂರ), ಹುಲಿಗೆಮ್ಮ (ನೂರ್ ಜಹಾನ್), ನೂರ್ ಜಹಾನ್ (ಶೀಲಾ ಬಡಿಗೇರ್) ಇವರೆಲ್ಲರೂ ಕತೆಗಳನ್ನು ವಿಮರ್ಶಿಸಿದರು.

ಕಥೆಗಾರರಾದ ಡಾ.ಸುಲೋಚನಾ ಕಥಾಸಂಕಲನದ ಕುರಿತು ಮೆಲುಕು ಹಾಕಿದರು. ಜಿಲ್ಲೆಯ ಕಥೆಗಾರರ ಕತೆಗಳನ್ನು ವಿಮರ್ಶಿಸುವುದು ವಿಜಯನಗರ ಕನ್ನಡದ ಕಟ್ಟೆ ವೇದಿಕೆಯ ಉದ್ದೇಶ. ಪ್ರತಿ ತಿಂಗಳು ಎರಡನೇ ಭಾನುವಾರ ಒಬ್ಬೊಬ್ಬ ಕತೆಗಾರನ ಒಂದೊಂದು ಪುಸ್ತಕವನ್ನು ವಿಮರ್ಶೆಗೊಳಪಡಿಸಲಾಗುತ್ತದೆ. ಆಸಕ್ತ ಕತೆಗಾರರು ಭಾಗವಹಿಸಬಹುದು ಎಂದರು. ಸಾಹಿತಿ ಜಗದೀಶ ಬೆನ್ನೂರ್ ನಿರ್ವಹಿಸಿದರು.