ಸಾರಾಂಶ
ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ ೯೩ನೇ ಅಧಿವೇಶನಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದರು.ಅವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಬುಧವಾರ ಆಯೋಜಿಸಿದ ಸಾಹಿತ್ಯ ಸಮ್ಮೇಳನದ ೯೩ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯ ಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತಿತ್ವ, ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಸಲಹೆ ನೀಡಿದರು.ಬಹುಮಾನಕ್ಕಾಗಿ, ಕೀರ್ತಿಗಾಗಿ ಹಾಗೂ ಹಣ ಸಂಪಾದನೆಗಾಗಿ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ವಿಚಾರಗಳು, ಹೊಸ ಪಾತ್ರಗಳು, ಹೊಸ ಸನ್ನಿವೇಶಗಳು ದೊರಕಿದಾಗ ಪರಕಾಯ ಪ್ರವೇಶ ಮಾಡಿ ಸಾಹಿತ್ಯ ಕೃತಿಗಳನ್ನು ಸಮಾಜಕಲ್ಯಾಣಕ್ಕಾಗಿ ಪ್ರೀತಿಯಿಂದ ಬರೆಯಬೇಕು. ಆಗ ಮಾತ್ರ ಮಿದುಳು ಸಕ್ರಿಯವಾಗಿ ಸಾಹಿತಿಗಳು ಮಾನಸಿಕವಾಗಿ ಸದಾ ಚೈತನ್ಯಶೀಲರಾಗುತ್ತಾರೆ ಎಂದರು.ಬದುಕು ಹೇಗಿದೆಯೋ ಹಾಗೆ ಚಿತ್ರಿಸುವುದು ನವೋದಯ ಸಾಹಿತ್ಯವಾದರೆ, ಮುಂದೆ ಹೇಗೆ ಬದಲಾಗಬೇಕು ಎಂದು ಬರೆಯುವುದು ಪ್ರಗತಿಪರ ಸಾಹಿತ್ಯ. ವಿದೇಶದಲ್ಲಿ ಉದ್ಯೋಗ ಮಾಡಿ ಅಸ್ತಿತ್ವಕ್ಕಾಗಿ ಸಾಹಿತ್ಯ ರಚನೆ ಮಾಡುವುದು ನವ್ಯ ಸಾಹಿತ್ಯವಾಗಿದೆ. ಸುಂದರ ಬದುಕಿಗಾಗಿ ಹೋರಾಡಬೇಕು ಎಂದು ಬರೆಯುವುದು ಬಂಡಾಯ ಸಾಹಿತ್ಯವಾಗಿದೆ ಎಂದು ಅವರು ಹೇಳಿದರು.ಇಂದು ಮುದ್ರಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ಹಾಗೂ ಆಧುನೀಕರಣದಿಂದಾಗಿ ಹೆಚ್ಚು ಕೃತಿಗಳು ಪ್ರಕಟವಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಇಂದು ಕಾದಂಬರಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಕಥೆ ಬರೆಯುವವರ ಸಂಖ್ಯೆ ಮತ್ತು ಓದುವವರ ಸಂಖ್ಯೆ ಹೆಚ್ಚಾಗಿದೆ. ಕಥಾ ಸಾಹಿತ್ಯ ಅರ್ಥಪೂರ್ಣವಾಗಿ ಬೆಳೆಯುತ್ತಿದೆ. ಹೃದಯದಿಂದ, ಪ್ರೀತಿಯಿಂದ ಬಂದ ಆಲೋಚನೆಗಳನ್ನು ಬಳಸಿ ಉತ್ತಮ ಕಥೆಗಳನ್ನು ಬರೆಯಬಹುದು ಎಂದು ಅಭಿಪ್ರಾಯಪಟ್ಟರು.ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು:ಅಧ್ಯಕ್ಷತೆ ವಹಿಸಿದ ವಿಶ್ವವಾಣಿ ಪತ್ರಿಕೆಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಕನ್ನಡ ಬೆಳೆಸಬೇಕಾದರೆ, ಕನ್ನಡ ಬಳಸಬೇಕು ಎಂದು ಹೇಳಿದರು.ಕನ್ನಡಕ್ಕೆ ಸ್ವಂತ ಲಿಪಿ ಇದ್ದು ಎಲ್ಲ ದೃಷ್ಟಿಯಿಂದಲೂ ಕನ್ನಡ ಅತ್ಯಂತ ಪರಿಪೂರ್ಣ, ಸಮೃದ್ಧ ಹಾಗೂ ಸುಂದರ ಭಾಷೆಯಾಗಿದೆ. ಆದರೆ, ಕನ್ನಡಕ್ಕೆ ದೊಡ್ಡ ಸವಾಲು ಭಾಷೆ. ಕನ್ನಡ ಉಳಿಸಬೇಕಾದರೆ ಭಾಷಾ ಶುದ್ಧಿಯೊಂದಿಗೆ ಮನೆಯಲ್ಲಿ ಹಾಗೂ ವ್ಯವಹಾರದಲ್ಲಿ ನಿತ್ಯವೂ ಶುದ್ಧ ಕನ್ನಡ ಬಳಸಬೇಕು. ಭಾಷೆ ಸ್ವಚ್ಛವಾಗಿದ್ದರೆ ಸಾಹಿತ್ಯವೂ ಸ್ವಚ್ಛವಾಗಿರುತ್ತದೆ.ಸಾಹಿತ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಸಾಹಿತ್ಯವು ದೈನಂದಿನ ಬದುಕು ಮತ್ತು ಸಮಾಜಕ್ಕೆ ಸಂಬಂಧಪಟ್ಟಿದೆ. ಇಂಗ್ಲಿಷ್ ಪದಗಳ ಬಳಕೆಯಿಂದ ಕನ್ನಡ ಅಪಾಯದ ಅಂಚಿನಲ್ಲಿದೆ ಎಂದು ಅವರು ಎಚ್ಚರಿಕೆ ನೀಡಿದ ಅವರು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಧರ್ಮಸ್ಥಳದ ಕೊಡುಗೆಯನ್ನು ಶ್ಲಾಘಿಸಿದರು.ಧರ್ಮಸ್ಥಳದ ಸಂಶಯ ಗುಂಡಿಗಳು ಮುಚ್ಚಿವೆ:
ಧರ್ಮಸ್ಥಳದ ಬಗ್ಗೆ ಇದ್ದ ಸಂಶಯದ ಗುಂಡಿಗಳೆಲ್ಲಾ ಮುಚ್ಚಿ ಹೋಗಿವೆ. ಬುರುಡೆಗಳು ಬರಿದಾಗಿವೆ. ಸುಳ್ಳು ಮಲಗಿದೆ. ಸತ್ಯ ಗೆದ್ದಿದೆ. ತನ್ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಕಟವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಗುಮೊಗ, ಸ್ಥಿತಪ್ರಜ್ಞೆ ಮತ್ತು ನಿಷ್ಕಳಂಕ ವ್ಯಕ್ತಿತ್ವದಿಂದ ಅವರು ಮತ್ತೆ ಶೋಭಾಯಮಾನವಾಗಿ ಬೆಳಗುತ್ತಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳ ಕ್ಷೇತ್ರವು ಅಂತಾರಾಷ್ಟ್ರೀಯ ಮಟ್ಟದ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಇನ್ನಷ್ಟು ಬೆಳೆಯಲಿ, ಬೆಳಗಲಿ ಎಂದು ವಿಶ್ವೇಶ್ವರ ಭಟ್ ಹಾರೈಸಿದರು.ಶಾಂತಿ, ಸೌಹಾರ್ದತೆ ಮೂಡಿಸುವುದೇ ಸಾಹಿತ್ಯದ ಉದ್ದೇಶ: ಡಾ.ಹೆಗ್ಗಡೆಸಾಹಿತ್ಯ ಮತ್ತು ಜೀವನಕ್ಕೆ ಅವಿನಾಭಾವ ಸಂಬಂಧವಿದ್ದು, ಸರ್ವರ ಹಿತವನ್ನು ಬಯಸುವ ಸಾಹಿತ್ಯ ಸಾತ್ವಿಕವಾದ, ಸಭ್ಯ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುತ್ತದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದರು.ರಾಮಾಯಣ, ಮಹಾಭಾರತಗಳಿಂದ ಹಿಡಿದು ಆಧುನಿಕ ಸಾಹಿತ್ಯದ ತನಕ ಸಾಹಿತ್ಯವು ಆದರ್ಶ ಜೀವನವನ್ನು ರೂಪಿಸುತ್ತಾ ಬಂದಿದೆ. ಪುರಾಣಕಥೆಗಳು, ಧಾರ್ಮಿಕ ಕಥೆಗಳು ಮಾನವನ ಮೇಲೆ ಗಾಢ ಪರಿಣಾಮ ಬೀರಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಸಾಹಿತ್ಯವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನ ಜೀವನವಿಲ್ಲದೆ ಸಾಹಿತ್ಯವಿಲ್ಲ ಎಂಬ ಮಾತಿನಂತೆ, ಸಭ್ಯ, ಸುಸಂಸ್ಕೃತ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಪ್ರಮುಖ ಪಾತ್ರವಹಿಸುತ್ತದೆ. ಸರ್ವರ ಹಿತವನ್ನು ಬಯಸುವ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯವಾಗಿದೆ ಎಂದರು.ಡಿಜಿಟಲ್ ಮಾಧ್ಯಮದ ಮೂಲಕ ಇಂದು ಅನೇಕ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಅಂತರ್ಜಾಲದಲ್ಲಿ ಸಾಹಿತ್ಯ, ಕಲೆ, ಸಂಗೀತದ ಬಗ್ಯೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಆಧುನಿಕ ತಂತ್ರಜ್ಞಾನದ ಬಳಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದೆ ಎಂದು ಹೇಳಿದರು.ಧರ್ಮಸ್ಥಳದಿಂದ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ:
ಧರ್ಮಸ್ಥಳದಲ್ಲಿ ಪ್ರತೀವರ್ಷ ಆಷಾಢ ಮತ್ತು ಶ್ರಾವಣಮಾಸದಲ್ಲಿ ಪುರಾಣ ವಾಚನ-ಪ್ರವಚನ, ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಸಂಕಿರಣ, ‘ಮಂಜುವಾಣಿ’ ಮತ್ತು ‘ನಿರಂತರ’ ಮಾಸಪತ್ರಿಕೆಗಳ ಪ್ರಕಾಶನ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ನೈತಿಕಮೌಲ್ಯಗಳ ಪುಸ್ತಕಗಳ ಪ್ರಕಾಶನ, ಯಕ್ಷಗಾನ ಬಯಲಾಟ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.ಗ್ರಾಮೀಣ ಪ್ರದೇಶಗಳಲ್ಲಿ ೨೨೦೦ ಗ್ರಂಥಾಲಯಗಳನ್ನು ಪ್ರಾರಂಭಿಸಿ ಓದುವ ಹವ್ಯಾಸ ಬೆಳೆಸಲಾಗುತ್ತದೆ ಎಂದು ಹೆಗ್ಗಡೆಯವರು ಮಾಹಿತಿ ನೀಡಿದರು.ಉಪನ್ಯಾಸಗಳು: ಬೆಂಗಳೂರಿನ ಶಾಂತಾ ನಾಗಮಂಗಲ, ಡಾ. ರಘು, ವಿ., ಧಾರವಾಡದ ಡಾ. ಬಿ.ಎಂ. ಶರಭೇಂದ್ರ ಸ್ವಾಮಿ ಸಾಹಿತ್ಯ ಮತ್ತು ಸಾರ್ಥಕ ಬದುಕಿನ ಬಗ್ಗೆ ಉಪನ್ಯಾಸ ನೀಡಿದರು.ರಾಜಶ್ರೀ ಎಸ್. ಹೆಗ್ಡೆ ವಂದಿಸಿದರು.ಉಜಿರೆಯ ಎಸ್ಡಿಎಂ ಕಾಲೇಜಿನ ಉನ್ಯಾಸಕರಾದ ಡಾ. ಶ್ರೀಧರ ಭಟ್ ಮತ್ತು ಡಾ. ದಿವಾಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))