ಕನ್ನಡಪ್ರಭ ವಾರ್ತೆ ಮುಧೋಳ
ಹಿಂದು ಧರ್ಮದಲ್ಲಿ ಜಾತಿಯ ವ್ಯವಸ್ಥೆ ಮುಗಿಲುಮುಟ್ಟಿದೆ. ಮನುಷ್ಯ ಮನುಷ್ಯರಲ್ಲಿ ದ್ವೇಷ, ಅಸೂಯೆ ಭಾವನೆ ಮೂಡಿ ವೈಮನಸ್ಸುಗಳಿಂದ ಒಬ್ಬರಿಗೊಬ್ಬರು ಸಂಪರ್ಕ ಕಡಿತಗೊಂಡು ಸಂಬಂಧದಿಂದ ದೂರು ಉಳಿಯುವಂತಹ ಪ್ರಸಂಗಗಳು ಇತ್ತಿಚೆಗೆ ಹೆಚ್ಚುತ್ತಲಿವೆ. ಇಂತಹ ಪ್ರಸಂಗಗಳು ಎಂದಿಗೂ ನಡೆಯಬಾರದು. ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲ ಜಾತಿಯ ಶರಣರನ್ನು ಒಂದುಗೂಡಿಸುವ ಕೆಲಸ ಮಾಡಿದ್ದು, ಬಸವಣ್ಣನವರಂತೆ ನಾವು ಸಹ ಎಲ್ಲ ಜಾತಿಯ ಜನರ ಜೊತೆ ಒಂದಾಗಿ ಚೆಂದಾಗಿ ಬೆರೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸಲಹೆ ನೀಡಿದರು.ಮುಧೋಳ ತಾಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಭಾನುವಾರ ಮಡಿವಾಳ ಮಾಚಿದೇವ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸವ-2026ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮಡಿವಾಳ ಮಾಚಿದೇವರು ಲಿಂಗಾಯತ ಸಮುದಾಯದ ಮಹಾನ್ ಶರಣರು, ಕಾಯಕಯೋಗಿಗಳಾಗಿ ಸಮಾಜದಲ್ಲಿ ಶ್ರಮದ ಗೌರವ, ಸಮಾನತೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರಚಾರ ಮಾಡಿದರು. ಅವರ ವಚನಗಳು ಮತ್ತು ಆದರ್ಶಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಮಡಿವಾಳ ಸಮುದಾಯದ ಶ್ರಮಜೀವಿಗಳು. ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರ ಈ ಸಮುದಾಯದ ಶಿಕ್ಷಣ, ಉದ್ಯೋಗ, ಸಾಮಾಜಿಕ ಉನ್ನತಿ ಮತ್ತು ಒಗ್ಗಟ್ಟಿಗೆ ಬದ್ಧವಾಗಿದೆ ಎಂದರು.
ಮುಧೋಳ ವಿರಕ್ತಮಠ-ಗವಿಮಠದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಅನಂತರಾವ್ ಘೋರ್ಪಡೆ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಸಮಾಜದ ಜಿಲ್ಲಾಧ್ಯಕ್ಷ ಗೋಪಿ ಮಡಿವಳರ, ಸಮಾಜದ ಪ್ರಮುಖ ರಾದ ವೀರೇಶ ಮಡಿವಾಳರ, ಪರಶುರಾಮ ಪರೀಟ, ಮಲ್ಲಪ್ಪ ಮಡಿವಾಳರ, ಸಾಗರ ಪರೀಟ, ಲಕ್ಷ್ಮಣ ಪರೀಟ, ಶಾಂತಾ ಮಡಿವಾಳರ, ಕವಿತಾ ಮಡಿವಾಳರ, ಸುಲೋಚನಾ ಮಡಿವಾಳರ, ಜಯಶ್ರೀ ಪರೀಟ, ಕವಿತಾ ಪರೀಟ, ಗೀತಾ ಪರೀಟ, ರೇಖಾ ಪರೀಟ, ಜ್ಯೋತಿ ಮಡಿವಾಳರ ಸೇರಿದಂತೆ ಸಮಿತಿಯ ಸದಸ್ಯರು, ಮಡಿವಾಳ (ಪರೀಟ) ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಸಾಹಿತಿ ಅನಿತಾ ಪಾಟೀಲ ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ನೀಡುವರು.
ಮಡಿವಾಳ ಮಾಚಿದೇವ ಪ್ರಶಸ್ತಿ ಪುರಸ್ಕೃತರು:
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ, ಸಾಹಿತಿ ಡಾ.ಶಿವಾನಂದ ಕುಬಸದ, ವಕೀಲ ಪ್ರಕಾಶ ವಸ್ತ್ರದ, ಶಶಿ ಟ್ರಸ್ಟ್ ಪ್ರಧಾನ ಸಂಚಾಲಕ ಚಂದ್ರಶೇಖರ ದೇಸಾಯಿ, ಪತ್ರಕರ್ತರಾದ ವಿಶ್ವನಾಥ ಮುನವಳ್ಳಿ, ವೆಂಕಟೇಶ ಗುಡೆಪ್ಪನವರ, ಉಮೇಶ ಬಾಡಗಿ, ರಾಮಜಿ ಘೋರ್ಪಡೆ ಅವರಿಗೆ ಪ್ರಸಕ್ತ ಸಾಲಿನ ಶ್ರೀ ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.