ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆ

ಹುಬ್ಬಳ್ಳಿ: ಕವಿಗಳು ಏಕೆ ಬರೆಯಬೇಕು ಎಂಬ ಆತ್ಮಪ್ರಶ್ನೆಯನ್ನು ಮುಂದಿಟ್ಟುಕೊಂಡು ಬರೆಯುತ್ತಲೇ ಇರಬೇಕು, ಕಲ್ಪನೆಯ ಮೂಲಕ ಸತ್ಯವನ್ನು ಹೊರಹಾಕಬೇಕು ಎಂದು ಹೈದರಾಬಾದ್‌ನ ಉರ್ದು ಲೇಖಕಿ ಹಾಗೂ ಹೋರಾಟಗಾರ್ತಿ ನಿಶತ್ ಜಮೀಲಾ ಕಿವಿಮಾತು ಹೇಳಿದರು.

ಅವರು ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 12ನೇ ಮೇ ಸಾಹಿತ್ಯ ಮೇಳದ ಎರಡನೆಯ ದಿನ ನಡೆದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದರು.

ಜೀವನದ ಅರ್ಥವನ್ನು ಹುಡುಕುವ ಸಂದರ್ಭದಲ್ಲಿ ಬರವಣಿಗೆ ಮಹತ್ವದ ಅಭಿವ್ಯಕ್ತಿ ಮಾರ್ಗವಾಗಿದೆ. ಸಮಾಜದಲ್ಲಿ ಶಾಂತಿ ಇದ್ದರೂ ಸಂತೋಷದ ಕೊರತೆ ಕಂಡುಬಂದರೆ ಅದನ್ನು ಹೇಗೆ ತರುವುದು ಎಂಬ ಪ್ರಶ್ನೆಯೂ ಮಹತ್ವದ್ದಾಗಿದೆ ಎಂದರು.

ತಾವು ಒಂದು ಸಂಸ್ಥೆಯನ್ನು ಆರಂಭಿಸಿ ಮಹಿಳೆಯರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅನುಭವವನ್ನು ಹಂಚಿಕೊಂಡ ಅವರು, ಹೈದರಾಬಾದ್‌ನಲ್ಲಿ ನಡೆಯುವ ಕೋಮು ಸಂಘರ್ಷಗಳು ಮತ್ತು ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ನೇರವಾಗಿ ಅನುಭವಿಸಿದ್ದಾಗಿ, ಈಗ ಅವುಗಳ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ಇಂದಿನ ಕವಿಗಳ ಕಾವ್ಯ ವಸ್ತು ಮತ್ತು ಅನುಭವ ಆಳ ಮತ್ತು ಸೂಕ್ಷ್ಮವಾಗಿದೆ. ಆದರೆ, ಕಾಲಭಾಷೆ ಕಾಣುತ್ತಿಲ್ಲ, ಇದು ಕಾವ್ಯ ಪರಂಪರೆಯ ಮುಂದುವರಿಕೆಗೆ ದೊಡ್ಡ ತೊಡಕಾಗಿದೆ. ಇಂದಿನ ಕಾಲಭಾಷೆ ಪಕ್ವಗೊಳ್ಳಬೇಕಾದರೆ ಬಸವಣ್ಣ, ಸರ್ವಜ್ಞ, ಮುಂತಾದ ನೆಲಮೂಲ ಕವಿಗಳ ವಚನ, ಕವಿತೆಗಳ ಅಧ್ಯಯನ ಅವಶ್ಯ ಎಂದರು.

ಇದೇ ಸಂದರ್ಭದಲ್ಲಿ ಉರ್ದು ಲೇಖಕಿ ನಿಶತ್ ಜಮೀಲಾ ಅವರಿಗೆ ಕೌದಿ ನೀಡಿ ಗೌರವಿಸಲಾಯಿತು. ಹೈದರಾಬಾದ್‌ನ ತೆಲುಗು ಕವಯಿತ್ರಿ ಮರ್ಸಿ ಮಾರ್ಗರೇಟ್, ಆರನಕಟ್ಟೆ ರಂಗನಾಥ, ದೀಪಾ ಗೋನಾಳ. ಸೂರ್ಯಕೀರ್ತಿ ಬಿ.ವಿ., ಸುನೀತಾ, ಕೆ.ಬಿ. ವೀರಲಿಂಗನಗೌಡ್ರ, ಜಬೀವುಲ್ಲಾ ಅಸಾದ್, ನಾಗರಾಜ ಹರಪನಹಳ್ಳಿ, ಶಮೀಮ ಕುತ್ತಾರ್ ಕಾಸರಗೋಡು, ಸಿ.ಬಿ. ಐನಳ್ಳಿ, ಸದಾಶಿವ ಸೊರಟೂರು, ಎಂ.ಎಂ. ಮುಲ್ತಾನಿ, ಅಶೋಕ ಹೊಸಮನಿ, ಶಿಲ್ಪಾ ಮ್ಯಾಗೇರಿ, ಮಧು ಕಾರಗಿ ಮುಂತಾದ ಕವಿಗಳು ಕವನ ವಾಚಿಸಿದರು.