ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಮೂಡಲಗಿ ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತಿಗಳೊಂದಿಗೆ ತಾಲೂಕಿನ ಸರ್ವರು ಸೇರಿ ಕೆಲಸ ಮಾಡಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸ್ವಾಮೀಜಿ ಹೇಳಿದರು.ಪಟ್ಟಣದ ಶಿವಬೋಧರಂಗ ಮಠದಲ್ಲಿ ನ.23 ಹಾಗೂ 24ರಂದು ನಡೆಯಲಿರುವ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ ಕೆಲಸ ಎಂದರೆ ದೇವರ ಕೆಲಸ ಇದ್ದ ಹಾಗೆ. ಪ್ರತಿಯೊಬ್ಬರು ಸಮ್ಮೇಳನದ ಯಶಸ್ವಿಗೆ ಜವಾಬ್ದಾರಿಯುತವಾಗಿ ಫಲಾಪೇಕ್ಷೆ ಇಲ್ಲದೆ ದುಡಿಯಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಸಾಹಿತಿ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಮೂಡಲಗಿ ತಾಲೂಕಾಗಿ ಕೆಲವೇ ವರ್ಷಗಳಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಸಂಘಟಿಸುವ ಸೌಭಾಗ್ಯ ಸಿಕ್ಕಿರುವುದು ತಾಲೂಕಿಗೆ ಹೆಮ್ಮೆಯ ವಿಷಯ. ಕನ್ನಡದ ಸೇವೆ ಮಾಡುವುದು ಬಹಳ ಅಪೂರ್ವ ಕೆಲಸ. ಕನ್ನಡಕ್ಕಾಗಿ ದುಡಿದರೆ ತನುಮನಗಳು ಬಹಳಷ್ಟು ಸಂತೃಪ್ತಿಗೊಂಡು ಪ್ರೇರಣೆ ಸಿಗುತ್ತದೆ. ಜೀವನದಲ್ಲಿ ಆನಂದ ಲಭಿಸಲಿದೆ. ಸಮ್ಮೇಳನ ಯಶಸ್ವಿಯಾಗಬೇಕಾದರೆ ಸಮರ್ಪಣ ಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.ಸಮ್ಮೇಳನದಲ್ಲಿ ಅನೇಕ ಉದಯೋನ್ಮುಖ ಕಾಲಾವಿದರು, ಸಾಹಿತಿಗಳು, ಬೇರೆ ಬೇರೆ ರೀತಿಯ ಪ್ರತಿಭೆ ಹೊಂದಿದವರು ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ಅವಕಾಶ ಸಿಗದವರು ವೇದಿಕೆ ಮುಂಭಾಗದಲ್ಲಿ ಹುರಿದುಂಬಿಸಲು ಅವಕಾಶ ಸಿಗಲಿದೆ. ಕನ್ನಡಕ್ಕಾಗಿ ದುಡಿಯಲು ಇದೊಂದು ಉತ್ತಮ ಅವಕಾಶ ಎಂದರು.ಸಿ.ಪಿ.ಯಕ್ಸಂಬಿ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳವನ್ನು ಪೂಜ್ಯರ ಸಾನ್ನಿಧ್ಯದಲ್ಲಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯ, ಸಹಕಾರದಿಂದ ಎಲ್ಲರೂ ಕೂಡಿ ಸಡಗರ, ಸಂಭ್ರಮದಿಂದ ಆಚರಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಕಸಾಪ ಮೂಡಲಗಿ ತಾಲೂಕು ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಮಾತನಾಡಿ, ಸಮ್ಮೇಳಲ ಯಶಸ್ವಿಗೆ ಪೂರ್ವಭಾವಿ ಸಭೆ ಏರ್ಪಡಿಸಿ ಕಾರ್ಯಕ್ರಮವನ್ನು ಕಡಿಮೆ ಅವಧಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಮ್ಮಿಕೊಂಡಿದು. ಎಲ್ಲ ಕನ್ನಡಾಭಿಮಾನಿಗಳು ತಮ್ಮ ಪ್ರೀತಿಯನ್ನು ಕನ್ನಡ ಭಾಷೆ ಮೇಲೆ ಇಟ್ಟು ನಿಸ್ವಾರ್ಥ ಮನೋಭಾವದಿಂದ ಸಹಾಯ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮೀಜಿ, ಕಸಾಪ ಪದಾಧಿಕಾರಿಗಳು, ಸಾಹಿತ್ಯಗಳು, ಗಣ್ಯರು, ಶಿಕ್ಷಕರು, ಕನ್ನಡಪರ ಸಂಘಟನೆ ಪದಾಧಿಕಾರಿಗಳು ಇತರರು ಇದ್ದರು.