ಹೊಂದಾಣಿಕೆ ಇದ್ದರೆ ಮಾತ್ರ ನಾವು ಚುನಾವಣೆ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಬೇಡ. 2028ರ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟಕ್ಕೂ ಸಿದ್ಧರಾಗಿರೋಣ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದ್ದಾರೆ.
- ಎಚ್.ಎಸ್.ಶಿವಶಂಕರ್ ಹೇಳಿಕೆ । ಜೆಡಿಎಸ್ನಿಂದ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಬಿಎಲ್ಎ ಕಾರ್ಯಾಗಾರ
- - -ಕನ್ನಡಪ್ರಭ ವಾರ್ತೆ ಹರಿಹರ
ಹೊಂದಾಣಿಕೆ ಇದ್ದರೆ ಮಾತ್ರ ನಾವು ಚುನಾವಣೆ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಬೇಡ. 2028ರ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟಕ್ಕೂ ಸಿದ್ಧರಾಗಿರೋಣ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.ನಗರದ ಎಚ್.ಕೆ.ವಿ. ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಬಿಎಲ್ಎ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಡಿ.ಎ. ಪಕ್ಷದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ನಾವು ಮೈಮರೆತು ಪಕ್ಷ ಸಂಘಟನೆ ಬಿಟ್ಟರೆ ಬರುವ ಚುನಾವಣೆಯಲ್ಲಿ ದೊಡ್ಡ ಪೆಟ್ಟು ತಿನ್ನಬೇಕಾಗುತ್ತದೆ. ಆ ಹಿನ್ನೆಲೆ ಹೊಂದಾಣಿಕೆ ಆದರೂ ಸಿದ್ಧರಿರೋಣ, ಏಕಾಂಗಿಯಾಗಿ ಹೋರಾಟಕ್ಕೂ ಸಿದ್ಧ ಇರೋಣ. ಮತದಾರ ಪಟ್ಟಿ ಪರಿಷ್ಕರಣೆ ಪ್ರಮುಖವಾಗಿದ್ದು, ಪಕ್ಷದ ನೇಮಕಗೊಂಡಿರುವ ಬಿಎಲ್ಎಗಳು ನಕಲಿ ಮತದಾರರನ್ನು ಪತ್ತೆಹಚ್ಚುವುದು ಹಾಗೂ ಬಿಟ್ಟುಹೋದ ಮತದಾರರನ್ನು ಸೇರಿಸುವುದು ಜೊತೆಗೆ ವಿಪಕ್ಷದವರು ನಮ್ಮ ಪಕ್ಷದ ಮತದಾರರನ್ನು ತೆಗೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಈ ಮತದಾರ ಪಟ್ಟಿ ಪರಿಷ್ಕರಣೆ ಬಹಳ ಮಹತ್ವ ಹೊಂದಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿವೆ. ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಕಳೆದುಕೊಂಡಿವೆ. ಆದರೆ, ಕರ್ನಾಟಕದಲ್ಲಿ ಜೆಡಿಎಸ್ ಭದ್ರವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಮತದಾರರು ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ರಾಜ್ಯದ ಜನರು ಎಚ್.ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ಆಗಬೇಕೆಂಬ ನಿರೀಕ್ಷೆಯಲ್ಲಿದ್ದು. ಅವರು ಜಾರಿಗೆ ತಂದಿರುವ ಜನಪರ ಯೋಜನೆಗಳಾದ ಗ್ರಾಮವಾಸ್ತವ್ಯ, ರೈತರ ಸಾಲ ಮನ್ನಾ ಹೀಗೆ ಹಲವು ಕೀರ್ತಿ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.ಜೆಡಿಎಸ್ ವಕ್ತಾರ ರಾಜೇಗೌಡ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 30 ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು 3000 ಮತಗಳ ವ್ಯತ್ಯಾಸದಿಂದ ಸೋಲುವಂತಾಯಿತು ಎಂದರು.
ಪಕ್ಷದ ಮುಖಂಡ ಪರಮೇಶ್ ಗೌಡ್ರು ಮಾತನಾಡಿ, ಈ ಹಿಂದೆ ಎಚ್ ಶಿವಪ್ಪನವರು ಕೇವಲ 500 ಮತಗಳ ಅಂತರದಲ್ಲಿ ಸೋಲು ಬೇಕಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಆದಾಗ ನಕಲಿ ಮತದಾರರು ಪತ್ತೆಹಚ್ಚಲು ಸಾಧ್ಯ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ರಾಮನಗೌಡ, ಹರ್ಲಾಪುರ ಸಿದ್ದಲಿಂಗಪ್ಪ ರಮೇಶ್ ಮಾನೆ ಸೇರಿದಂತೆ ಹಲವರು ಮಾತನಾಡಿದರು.
ಪಕ್ಷದ ಮುಖಂಡರಾದ ಬಂಡೆರ್ ತಿಮ್ಮಣ್ಣ, ಮೆಟ್ಟಿಲುಕಟ್ಟೆ ಚಂದ್ರಣ್ಣ, ಸಿರಿಗೆರೆ ಕೊಟ್ರೇಶ್, ಮಲೆಬೆನ್ನೂರು ವಿಜಯ್ ಕುಮಾರ್, ಕರಿಬಸಪ್ಪ, ಪ್ರೇಮ್ ಕುಮಾರ್, ಜಿ.ನಂಜಪ್ಪ, ಹನುಮಂತಪ್ಪ ಜಿಗಳಿ, ಮಂಜುನಾಥ್, ನವೀನ್, ಮಂಜುನಾಥ್, ಚಂದ್ರಶೇಖರಪ್ಪ, ಬಿ.ಅಲ್ತಾಫ್ ಜಾಕೀರ್ ತನ್ವೀರ್ ಸದ್ದಾಂ, ಇಸ್ತ್ರಿ ಬಾಬು, ವಿನಾಯತ್, ಜಾಕಿರ್ ಬಿರ್ಲಾ ಮನ್ಸೂರ್ ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷೆ ಗಾಯತ್ರಿ, ವಸಂತ, ಮಂಜುಳಾ, ಲಕ್ಷ್ಮೀ, ರಾಗಿಣಿ ಇತರರು ಇದ್ದರು.- - -
(ಟಾಪ್ ಕೋಟ್) ಕ್ಷೇತ್ರದಲ್ಲಿ ಕೆಲವರು ಶಿವಶಂಕರನ್ನು ರಾಜಕೀಯದಿಂದ ಮುಗಿಸಬೇಕು ಎಂದು ಹೊರಟಿದ್ದಾರೆ ಎಂಬ ಮಾತುಗಳು ನಮಗೂ ತಲುಪಿವೆ. ಸಮಾಜದ ದುಡ್ಡು ಹೊಡೆದವರು ಮತ್ತೆ ಕೆಲವರು ಫ್ಲೆಕ್ಸ್ ಹಾಕುವ ಮೂಲಕ ನಾನು ಎಂಎಲ್ಎ ಆಗಬೇಕೆಂದು ಹೊರಟಿದ್ದಾರೆ. ಯಾವುದೇ ಒಬ್ಬ ನಾಯಕ ಹೋರಾಟದಿಂದ ಮಾತ್ರ ನಾಯಕನಾಗಲು ಸಾಧ್ಯ. ಶಿವಶಂಕರ್ ಹೋರಾಟದಿಂದ ಬಂದವನು, ಇವನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಜೀವ ಇರೋವರೆಗೂ ರಾಜಕೀಯ ಇರುತ್ತೇನೆ. ಈ ಕ್ಷೇತ್ರದ ಜನರಿಗಾಗಿ ಹೋರಾಡುತ್ತೇನೆ.- ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ.
- - --09HRR.04:
ಹರಿಹರದ ಎಚ್ಕೆವಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದಿಂದ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಬಿಎಲ್ಎ ಕಾರ್ಯಾಗಾರ ನಡೆಯಿತು.