ಹಾನಗಲ್ಲ: ಮನುಷ್ಯ ಮನುಷ್ಯನಿಗಾಗಿ ಈ ಪರಿಸರದ ನೀರು, ಮಣ್ಣು ವಾತಾವರಣ ಸುರಕ್ಷಿತ ರೀತಿಯಲ್ಲಿ ಸಂರಕ್ಷಿಸಬೇಕಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ ಕರೆ ನೀಡಿದರು. ಹಾನಗಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ತಾಲೂಕು ಅರಣ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡು ಬೆಳೆಸಲೇಬೇಕು. ಮಣ್ಣು ನೀರು ಕಲುಷಿಷತವಾಗದಂತೆ ಉಳಿಸಿಕೊಳ್ಳಬೇಕಾಗಿದೆ. ಇವು ನಮ್ಮ ಸಂಪತ್ತು. ಗಿಡ ಮರ ಬೆಳೆಸಲು ಮುಂದಾಗಬೇಕು. ಸಮೃದ್ಧ ಪರಿಸರಕ್ಕೆ ಕಾಡನ್ನು ನಾಡಿನವರೆಲ್ಲ ಉಳಿಸಿ ಬೆಳೆಸಬೇಕು. ಅರಣ್ಯ ಹೆಚ್ಚುತ್ತಿಲ್ಲ. ಅದನ್ನು ಹೆಚ್ಚಿಸಬೇಕು. ಬೇರೆ ದೇಶಕ್ಕೆ ಹೋಲಿಸಿದರೆ ಭಾರತದ ಅರಣ್ಯ ಪ್ರದೇಶ ಕಡಿಮೆಯೇ ಆಗಿದೆ. ಬೀಳು ಭೂಮಿ, ರಸ್ತೆ ಬದಿಗಳಲ್ಲಿ, ಮನೆಗಳ ಬಾಗಿಲು ಹಿತ್ತಲಗಳಲ್ಲಿ, ಸರ್ಕಾರಿ ಜಮೀನಿನಲ್ಲಿ ಗಿಡ ಬೆಳೆಸಲು ಮುಂದಾಗಬೇಕು. ಅರಣ್ಯ ಇಲಾಖೆ ಪ್ರತಿ ವರ್ಷ ಸಾರ್ವಜನಿಕರಿಗಾಗಿ ಲಕ್ಷಾಂತರ ಸಸಿಗಳನ್ನು ನೀಡುತ್ತದೆ. ಮನೆಗೊಂದು ಮರ, ಊರಿಗೊಂದು ವನ ಯೋಜನೆ ಸಾಕಾರವಾಗಬೇಕು. ರೈತರಿಗಾಗಿ ಕೃಷಿ ಅರಣ್ಯ ಪ್ರೊತ್ಸಾಹ ಯೋಜನೆ ಮೂಲಕ ಉಚಿತ ಸಸಿ ವಿತರಣೆ ಮಾಡಲಾಗುತ್ತಿದೆ ಎಂದರು.ರಾಷ್ಟ್ರೋತ್ಥಾನ ವಿದ್ಯಾಲಯದ ಪ್ರಾಚಾರ್ಯ ಜಿ.ಎಂ. ಶ್ರೀದೇವಿ, ವಲಯ ಅರಣ್ಯಾಧಿಕಾರಿ ಗಣೇಶ ಶೆಟ್ಟರ, ಸುನೀಲಕುಮಾರ ನಾಯಕ, ಕೃಷ್ಣಾ ಕಬ್ಬೂರ, ಸುನಿತಾ ಹುಲ್ಲತ್ತಿ, ಅಶೋಕ ಮಳಗಿ, ಪ್ರಿಯಾ ತಿರುಮಲೆ, ಸಹನಾ ಚಿಕ್ಕಮಠ, ಭಾಗ್ಯಶ್ರೀ ದೊಡ್ಡಮನಿ, ಗೌರಮ್ಮ ಬಿ., ಅಭಿಷೇಕ ಅಂದಲಗಿ, ಮಲ್ಲನಗೌಡ ಪಾಟೀಲ, ವಿಕ್ರಮ ಮನ್ನಾರಿ, ಬಸವರಾಜ ಜೆ. ಇದ್ದರು. ಜಾಗೃತಿ ಜಾಥಾ: ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ವಿದ್ಯಾರ್ಥಿಗಳು ಪರಿಸರ ಜಾಗೃತಿ ಜಾಥಾ ನಡೆಸಿದರು. ನಂತರ ಮಹಾತ್ಮಾಗಾಂಧಿ ವೃತ್ತದಲ್ಲಿ ಸಭೆ ಕಾರ್ಯಕ್ರಮ ನಡೆಯಿತು.