ಕನ್ನಡಪ್ರಭ ವಾರ್ತೆ ಮಡಿಕೇರಿ
ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಯವರು ಮಿತ ಇಂಧನ ಬಳಕೆ ಮಾಡುವುದರ ಬಗ್ಗೆ ಹೇಳಿದ್ದಾರೆ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ದಶಕ ವಿಪತ್ತಿನ ದಶಕವಾಗಿತ್ತು. ಇಂಧನ ಸಮಸ್ಯೆಯಿಂದ ಹೊರ ಬರಬೇಕಾಗಿದೆ. ಇಲ್ಲದಿದ್ದರೆ ದೊಡ್ಡ ತೊಂದರೆಯಾಗಲಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. 2047ಕ್ಕೆ ವಿಕಸಿತ ಭಾರತ ಆಗಬೇಕು ಎನ್ನುವ ಅವರ ಕನಸಿದೆ. ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಬಡವರಿಂದ ಹಿಡಿದು ಎಲ್ಲ ವರ್ಗದ ಜನರಿಗೆ ಅನುಕೂಲಕರವಾದ ಯೋಜನೆ ಜಾರಿ ಮಾಡಿದ್ದಾರೆ. ಇಂದು ತೈಲಕ್ಕಾಗಿ ಪಶ್ಚಿಮ ದೇಶಗಳನ್ನು ನಂಬಿಕೊಂಡಿದ್ದೇವೆ. ಅಲ್ಲೂ ಎರಡನೇ ಬಾರಿಗೆ ಯುದ್ಧವಾಗುತ್ತಿದೆ. ಇದರಿಂದ ಭಾರತ ಸಂಕಷ್ಟ ಎದುರಿಸಲಿದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ ಎಂದರು.
ಹೀಗಾಗಿ ಜನ ಭಾರತದ ಮುಂದಿನ ಭವಿಷ್ಯ ಏನಾಗಬಹುದು ಎಂದು ಚಿಂತಿಸಬೇಕು. ಅದಕ್ಕಾಗಿ ಈ ಹೇಳಿಕೆಯನ್ನು ಪ್ರಧಾನಿ ಕೊಟ್ಟಿದ್ದಾರೆ. ಅವರು ಮಾತನಾಡಿರುವುದು ಸರಿ ಇದೆ. ಸಂಕಷ್ಟ ಬಂದಾಗ ನಾವು ಒಂದೇ ಸಲ ಎದುರಿಸುದಕ್ಕಿಂತ ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ. ಆ ದೃಷ್ಟಿಯಿಂದ ಪ್ರಧಾನಿಯವರು ಹೀಗೆ ಹೇಳಿದ್ದಾರೆ. ಪಶ್ಚಿಮ ದೇಶಗಳನ್ನೇ ಇಂಧನಕ್ಕಾಗಿ ನಾವು ಅವಲಂಬಿಸಿದ್ದೇವೆ. ಇಂಧನದ ಉಪಯೋಗವನ್ನು ಸ್ವಲ್ಪ ಕಡಿಮೆ ಮಾಡದೇ ಹೋದರೆ ನಮಗೆ ಆಮದು ಸುಂಕ ಭರಿಸುವುದು ಕಷ್ಟವಾಗಲಿದೆ. ಇಂದು ಕೆಲವು ದೇಶಗಳು ಭಾರಿ ಪ್ರಮಾಣದಲ್ಲಿ ಆಮದು ಸುಂಕ ಭರಿಸುತ್ತಿವೆ.. ಆ ಸಂಕಷ್ಟಕ್ಕೆ ಹೋಗದಂತೆ ನಾವು ಇಂಧನ ಬಳಕೆ ಕಡಿಮೆ ಮಾಡಬೇಕಾಗಿದೆ. ಇಂಧನ ಕಡಿಮೆ ಬಳಕೆ ಮಾಡಿದರೆ ದೇಶ ಒಂದು ಲೆವೆಲ್ ನಲ್ಲಿ ಇರುತ್ತದೆ. ಈ ದೃಷ್ಟಿಯಿಂದ ಇಂಧನ ಕಡಿಮೆ ಬಳಸಬೇಕಾಗಿದೆ. ದೇಶದ ದೃಷ್ಟಿಯಿಂದ ನಾವೆಲ್ಲರೂ ಅದನ್ನು ಅನುಸರಿಸಬೇಕಾಗಿದೆ ಎಂದು ಬೋಪಯ್ಯ ಹೇಳಿದರು.