ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸಲಿವೆ.

ಶರಾವತಿ ಉತ್ಸವ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ಕನ್ನಡಪ್ರಭ ವಾರ್ತೆ ಹೊನ್ನಾವರ

ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸಲಿವೆ. ನಮ್ಮ ಸುತ್ತಮುತ್ತಲಿನ ಕಲೆಗೆ ಗೌರವಿಸುತ್ತಾ, ನಮ್ಮ ನಡುವಿನ ಸಾಧಕರನ್ನು ಸನ್ಮಾನಿಸುವ ಕಾರ್ಯದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆ ಮುಂಚೂಣಿಯಲ್ಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಭಟ್ ಹೇಳಿದರು.

ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ ಶರಾವತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಸಂಘಜೀವಿಯಾಗಿದ್ದು, ಅನುವಂಶಿಯವಾಗಿ ಕೆಲವು ಗುಣ ಅಳವಡಿಸಿಕೊಂಡರೂ, ಹೆಚ್ಚಿನ ಗುಣವನ್ನು ಸಮಾಜದಿಂದ ಕಲಿಯುತ್ತಾರೆ. ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮದಿಂದ ಮನರಂಜನೆ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯವಾಗುತ್ತಿದೆ ಎಂದರು.

ಶರಾವತಿಯು ಬರೀ ನದಿಯಾಗಿರದೇ ಈ ಭಾಗದ ಜೀವನಾಡಿಯಾಗಿದೆ. ಇದು ಸ್ವಚ್ಛವಾಗಿ ಮೈದುಂಬಿ ಎಲ್ಲಿಯವರೆಗೆ ಹರಿಯಲಿದೆಯೋ, ಅಲ್ಲಿಯವರೆಗೆ ನಮ್ಮ ಜೀವನ ನೆಮ್ಮದಿಯಿಂದ ಇರಲಿದೆ. ವಿಶ್ವದಲ್ಲಿ 21 ಸಾವಿರ ಮಿಲಿಯನ್ ಮೆಟ್ರಿಕ್ ಟನ್ ಪ್ಲಾಸ್ಟಿಕ್ ನದಿ, ಸಮುದ್ರ ಸೇರುತ್ತಿರುವುದು ಆತಂಕಕಾರಿಯಾಗಿದೆ. ಪಾಸ್ಟಿಕ್ ಕರಗಲು ಸರಿಸುಮಾರು 400 ವರ್ಷ ಬೇಕಿದೆ. ಶೇ.91ರಷ್ಟು ನಾವು ಬಳಸುವ ಪ್ಲಾಸ್ಟಿಕ್ ಪುನರ್ ಬಳಕೆಯಾಗುವುದಿಲ್ಲ. ನಾವು ಪ್ಲಾಸ್ಟಿಕ್ ಯುಗದಲ್ಲಿ ಬದುಕುತ್ತಿದ್ದೇವೆ. ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಬಳಸುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶರಾವತಿಯಂತಹ ನದಿಯನ್ನು ಸ್ವಚ್ಛವಾಗಿಡೋಣ ಎಂದು ಕರೆ ನೀಡಿದರು.

ಹಿರಿಯ ಸಹಕಾರಿ ಧುರೀಣ ದಿ. ಪಿ.ಎಸ್. ಭಟ್ ಉಪ್ಪೋಣಿ ಸ್ಮಾರಕ ಪ್ರಶಸ್ತಿಯನ್ನು ಸೆಂಟ್ ಮಿಲಗ್ರಿಸ್ ಸೌಹಾರ್ದ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಷ್ಣು ಆಚಾರಿ ಬಳ್ಕೂರ, ಜನಪದ ರತ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ತುಳಸು ಬೀರು ಗೌಡ ಅವರನ್ನು ಸನ್ಮಾನಿಸಲಾಯಿತು.

ಸಹಕಾರಿ ಧುರಿಣರು ಸಮಿತಿಯ ಗೌರವಾಧ್ಯಕ್ಷರಾಗಿದ್ದ ದಿ.ಪಿ.ಎಸ್. ಭಟ್ ಉಪ್ಪೋಣಿ ಅವರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಯಿತು.

ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿದ ಸೆಂಟ್ ಮಿಲಗ್ರಿಸ್ ಸೌಹಾರ್ದ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.

ಶರಾವತಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಅಧ್ಯಕ್ಷತೆ ವಹಿಸಿದ್ದರು. ನಗರಬಸ್ತಿಕೇರಿ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ನಾಯ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಸ್ವಾಗತಿಸಿ, ಎಸ್.ಜಿ. ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಮೇಧಾ ಭಟ್ ಒಗ್ಗರೆ ತಂಡದಿಂದ ಭಕ್ತಿ ಸಂಗೀತ, ವಸುಧಾ ಶರ್ಮಾ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.