ಸಾರಾಂಶ
ನಾಡು, ನುಡಿಗಾಗಿ ದುಡಿದವರ ಸ್ಮರಿಸೋಣ
ಕನ್ನಡಪ್ರಭ ವಾರ್ತೆ ಇಂಡಿ
ಕರ್ನಾಟಕ ರಾಜ್ಯ ನಾಮಕರಣಗೊಂಡು 50 ವರ್ಷ ಪೂರೈಸಿದೆ. ಈ ಸ್ಮರಣಾರ್ಥವಾಗಿ ಘನ ಸರ್ಕಾರ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ನಾಡು, ನುಡಿ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಕನ್ನಡದ ಜ್ಯೋತಿ ರಥಯಾತ್ರೆ ಕೈಗೊಂಡಿದೆ. ಇದು ನಮ್ಮ ಕನ್ನಡ ನಾಡಿನ ರಥೋತ್ಸವ. ಸಂಭ್ರಮದಿಂದ ಈ ರಥಯಾತ್ರೆಯನ್ನು ಸ್ವಾಗತಿಸುವ ಕಾರ್ಯ ಯಶಸ್ವಿಗೊಳಿಸಿದಕ್ಕಾಗಿ ತಮ್ಮೆಲ್ಲ ಕನ್ನಡ ಮನಸ್ಸುಗಳಿಗೆ ಅಭಿನಂದಿಸುವುದಾಗಿ ಎಸಿ ಅಬೀದ್ ಗದ್ಯಾಳ ಹೇಳಿದರು.ಅವರು ಸೋಮವಾರ ಪಟ್ಟಣದ ಶ್ರೀ ಸೇವಾಲಾಲ ವೃತ್ತದಲ್ಲಿ ಕರ್ನಾಟಕ ಸಂಭ್ರಮ 50 ಅಂಗವಾಗಿ ಆಗಮಿಸಿದ್ದ ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ,ಉಸಿರಾಗಲಿ ಕನ್ನಡ, ಹೆಸರಿನ ಜ್ಯೋತಿ ರಥಯಾತ್ರೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕನ್ನಡ ಭಾಷೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡದ ಇತಿಹಾಸದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ತಿಳಿದಿರಬೇಕು. ಕರ್ನಾಟಕ ಏಕೀಕರಣ ಮತ್ತು ನಾಡು, ನುಡಿಗಾಗಿ ದುಡಿದ ಮಹನೀಯರನ್ನು ನಾವು ಆಗಾಗ ಸ್ಮರಿಸಬೇಕು ಎಂದರು.
ಕನ್ನಡ ಜ್ಯೋತಿ ರಥಯಾತ್ರೆ ಪಟ್ಟಣದ ಸೇವಾಲಾಲ ವೃತ್ತದಲ್ಲಿ ಕುಂಭಕಳಸದೊಂದಿಗೆ ಲಿಂಬೆ ಹಣ್ಣಿನ ಹಾರದೊಂದಿಗೆ ಸ್ವಾಗತಿಸಿ ಬಾಬು ಜಗಜೀವನರಾಮ, ಟಿಪ್ಪುಸುಲ್ತಾನ, ಬಸವೇಶ್ವರ ವೃತ್ತದ ಮೂಲಕ ಹಾದು ತಾಪಂ ಕಚೇರಿ ಬಳಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ರಥಯಾತ್ರೆಯಲ್ಲಿ ಮಹಿಳೆಯರ ಕುಂಭ ಮೆರವಣಿಗೆ, ಆರತಿ, ಗೊಂಬೆ ಕುಣಿತ, ಹಲಗೆ ವಾದನ, ಡೊಳ್ಳು ಕುಣಿತದ ಮೂಲಕ ನಾಡಧ್ವಜದೊಂದಿಗೆ ವಿವಿಧ ಕಲಾತಂಡದೊಂದಿಗೆ ಸಂಭ್ರಮದಿಂದ ಮೆರವಣಿಗೆ ಮಾಡಲಾಯಿತು.
ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ತಾಪಂ ಇಒ ಬಾಬು ರಾಠೋಡ, ಬಿಇಒ ಟಿ.ಎಸ್.ಆಲಗೂರ, ಕ್ಷೇತ್ರಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಕರವೇ ಮುಖಂಡರಾದ ಬಾಳು ಮುಳಜಿ, ಶಿವಾನಂದ ಮಲಕಗೊಂಡ, ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಅಯೂಬ ಬಾಗವಾನ,ಭೀಮಾಶಂಕರ ಮೂರಮನ,ದೇವೆಂದ್ರ ಕುಂಬಾರ, ಅಸ್ಲಂ ಕಡಣಿ, ಶ್ರೀಶೈಲ ಪೂಜಾರಿ, ಗಂಗಾಧರ ನಾಟೀಕಾರ, ಮಹೇಶ ಹೂಗಾರ, ಆನಂದ ಪವಾರ, ಆರ್.ಆರ್.ಬಗಲೂರ, ಪುರಸಭೆ ಅಧಿಕಾರಿಗಳಾದ ಶಿವು ಸೋಮನಾಯಕ, ನಿಂಬಾಳಕರ, ಮುತ್ತು ಮುರಾಳ, ಹುಚ್ಚಪ್ಪ ಶಿವಶರಣ,ಬಸವರಾಜ ಗೊರನಾಳ,ಸುಕನ್ಯಾ ಬಗಲೂರ ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು,ಕನ್ನಡಪರ ಸಂಘಟನೆ ಮುಖಂಡರು ಮೆರವಣಿಗೆಯಲ್ಲಿ ಇದ್ದರು.ಇದೇ ಸಂದರ್ಭದಲ್ಲಿ ಆ್ಯಪಲ್ ಶಾಲೆಯ ವಿದ್ಯಾರ್ಥಿಗಳು ಭುವನೇಶ್ವರಿ,ರಾಣಿ ಚನ್ನಮ್ಮ,ಮಡಿಕೇರಿ ವೇಶ ,ಅಕ್ಕಮಹಾದೇವಿ ವೇಷಧಾರಿಗಳಾಗಿ ಭಾಗವಹಿಸಿದ್ದರು.