ಸಾರಾಂಶ
ಶನಿವಾರ ಸಂಜೆ ಲಕ್ಷ್ಮೇಶ್ವರ ಪಟ್ಟಣದ ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ನಡೆದ ಕಾರ್ತೀಕ ಮಾಸದ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಪಾಂಡುರಂಗ ದೇವಸ್ಥಾನದಲ್ಲಿ ಕಾರ್ತೀಕೋತ್ಸವ ಸಮಾರಂಭ
ಲಕ್ಷ್ಮೇಶ್ವರ: ನಮ್ಮ ಸುತ್ತಲೂ ಆವರಿಸಿರುವ ಅಜ್ಞಾನದ ಕತ್ತಲೆ ಓಡಿಸಿ ಜ್ಞಾನದ ದೀಪ ಹಚ್ಚುವ ಮೂಲಕ ಕಾರ್ತೀಕೋತ್ಸವ ಆಚರಿಸುವುದು ಅಗತ್ಯವಾಗಿದೆ ಎಂದು ಬಜಾರ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ ಹೇಳಿದರು.ಶನಿವಾರ ಸಂಜೆ ಪಟ್ಟಣದ ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ನಡೆದ ಕಾರ್ತೀಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ತೀಕ ಮಾಸದಲ್ಲಿ ದೀಪ ಹಚ್ಚುವುದು ಕತ್ತಲೆ ಕಳೆದು ನಮ್ಮ ಬಾಳಲ್ಲಿ ಬೆಳಕು ಹರಡಲಿ ಎನ್ನುವುದರ ಸಾಂಕೇತಿಕ ರೂಪ, ನಮ್ಮಲ್ಲಿನ ಅಜ್ಞಾನವನ್ನು ದೂರ ಓಡಿಸಿ ಜ್ಞಾನದ ದೀಪ ಹಚ್ಚುವ ಮೂಲಕ ನಮ್ಮ ಬಾಳಲ್ಲಿನ ಕತ್ತೆಲೆ ಓಡಿಸುವುದು ನಮ್ಮೆಲ್ಲರ ಗುರಿಯಾಗಿರಬೇಕು. ಪಾಂಡುರಂಗ ದೇವಸ್ಥಾನದ ಆಡಳಿತ ಮಂಡಳಿಯು ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಸಾಗಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಡಾ. ನವೀನ ಕುಲಕರ್ಣಿ ಸಭೆಯಲ್ಲಿ ಮಾತನಾಡಿದರು. ಸಮಾರಂಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಗುರು ಹಿರಿಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಯುವಕ ಸಂಘದ ಅಧ್ಯಕ್ಷರು ಇದ್ದರು.