3ನೇ ಬಾರಿ ಮೋದಿ ಸರ್ಕಾರ ರಚಿಸಲು ಶ್ರಮಿಸೋಣ: ಮಾಲೀಕಯ್ಯ

| Published : Feb 11 2024, 01:48 AM IST

ಸಾರಾಂಶ

ಮತದಾರರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಹತ್ವ ಮತ್ತು ಪ್ರಯೋಜನಗಳ ಕುರಿತು ತಿಳುವಳಿಕೆ ನೀಡುವ ಮೂಲಕ ಮೂರನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾಗುವ ಸಲುವಾಗಿ ಎಲ್ಲರೂ ಕೆಲಸ ಮಾಡೋಣ.

ಕನ್ನಡಪ್ರಭ ವಾರ್ತೆ ಚವಡಾಪುರ

2 ಬಾರಿ ಕೇಂದ್ರದಲ್ಲಿ ಯಶಸ್ವಿ ಆಡಳಿತ ನೀಡಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ತಂದು ನಿಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಬಾರಿ ರಚನೆಯಾಗುವ ವಿಶ್ವಾಸವಿದ್ದು ನಾವೆಲ್ಲರೂ ಅದಕ್ಕಾಗಿ ಶ್ರಮಿಸೋಣ ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ ಹೇಳಿದರು.

ಅಫಜಲ್ಪುರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಜನಪ್ರೀಯ ಕಾರ್ಯಕ್ರಮಗಳಾದ ಜನೌಷಧಿ, ಜಲಜೀವನ ಮಿಷನ್, ಆಯುಷ್ಮಾನ್ ಭಾರತ, ಉಜ್ವಲಾ, ಕಿಸಾನ್ ಸಮ್ಮಾನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಕುರಿತು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಗ್ರಾಮ ಚಲೋ ಅಭಿಯಾನದಿಂದ ಮಾಡೋಣ. ಮತದಾರರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಹತ್ವ ಮತ್ತು ಪ್ರಯೋಜನಗಳ ಕುರಿತು ತಿಳುವಳಿಕೆ ನೀಡುವ ಮೂಲಕ ಮೂರನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾಗುವ ಸಲುವಾಗಿ ಎಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯೆ ಶೋಭಾ ಬಾಣಿ ಮಾತನಾಡಿ, ಗ್ರಾಮ ಚಲೋ ಅಭಿಯಾನ ರಾಜ್ಯವ್ಯಾಪಿ ನಡೆಯುತ್ತಿದ್ದು ಇದರ ಮಾಹಿತಿಯನ್ನು ಮನೆ ಮನೆಗೆ ತಿಳಿಸುವ ಕೆಲಸ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಾಡೋಣ. ಬಿಜೆಪಿ ಪಕ್ಷದಲ್ಲಿ ದುಡಿದವರನ್ನು ಗುರುತಿಸಿ ಜವಾಬ್ದಾರಿ ನೀಡುವ ಪದ್ದತಿ ಇದೆ. ಹೀಗಾಗಿ ಪಕ್ಷಕ್ಕಾಗಿ ಯಾರು ಸೇವೆ ಸಲ್ಲಿಸುತ್ತಾರೆ ಅವರಿಗೆ ಬರುವ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶೈಲೇಶ ಗುಣಾರಿ, ನಗರಾಧ್ಯಕ್ಷ ಶರಣು ಪದಕಿ, ಗ್ರಾಮ ಚಲೋ ಅಭಿಯಾನದ ಜಿಲ್ಲಾ ಸಂಚಾಲಕ ವಿದ್ಯಾಧರ ಮಂಗಳೂರೆ, ತಾಲೂಕು ಸಂಚಾಲಕ ಭೀಮರಾವ ಕಲಶೆಟ್ಟಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಮಲ್ಲಿನಾಥ ಪಾಟೀಲ್, ರಶಿದ ಪಟೇಲ, ಬಿರಣ್ಣ ಕಲ್ಲೂರ, ರವಿ ತೆಗ್ಗೆಳ್ಳಿ, ಶಿವು ಘಾಣೂರ, ಮಲ್ಲಿಕಾರ್ಜುನ ದುತ್ತರಗಾಂವ, ಮಹೇಶ ಅಜಗೊಂಡ, ಶ್ರೀಶೈಲ್ ಬಳೂರ್ಗಿ, ಶಿವರುದ್ರಯ್ಯ ಮಠಪತಿ ಸೇರಿದಂತೆ ಅನೇಕರು ಇದ್ದರು.