ಸತ್ಸಂಗಗಳು ದಿನಚರಿಗಳಾಗಲಿ: ಗುರುದತ್ತ ಚಕ್ರವರ್ತಿ

| Published : Jun 07 2025, 02:46 AM IST / Updated: Jun 07 2025, 02:47 AM IST

ಸತ್ಸಂಗಗಳು ದಿನಚರಿಗಳಾಗಲಿ: ಗುರುದತ್ತ ಚಕ್ರವರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಆಚರಣೆಗಳನ್ನು ಕೈಗೊಳ್ಳುವ ಮೊದಲು ಅದರ ಅರ್ಥ ತಿಳಿದುಕೊಳ್ಳಬೇಕು. ಯಾಜ್ಞವಲ್ಕ್ಯರನ್ನು ಮಾತ್ರ ಯೋಗೀಶ್ವರರೆಂದು ಕರೆಯಲಾಗುತ್ತದೆ. ಅವರು ಎಲ್ಲ ವೇದಗಳನ್ನೂ ಅರಿತಿದ್ದರು.

ಹಾನಗಲ್ಲ: ಸತ್ಸಂಗಗಳು ನಮ್ಮ ದಿನಚರಿಗಳಾಗಬೇಕು. ಪಾಲಕರು ಧರ್ಮಾಚರಣೆಗಳನ್ನು ಪಾಲಿಸಿದರೆ ಮಕ್ಕಳೂ ಪಾಲಿಸುತ್ತಾರೆ ಎಂದು ಅಗಡಿ ಆನಂದವನದ ಗುರುದತ್ತ ಚಕ್ರವರ್ತಿಗಳು ತಿಳಿಸಿದರು.ಗುರುವಾರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಯೋಗೀಶ್ವರ ಯಾಜ್ಞವಲ್ಕ್ಯರ ಜಯಂತ್ಯುತ್ಸವದಲ್ಲಿ ಅಷ್ಟೋತ್ತರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಯಾವುದೇ ಆಚರಣೆಗಳನ್ನು ಕೈಗೊಳ್ಳುವ ಮೊದಲು ಅದರ ಅರ್ಥ ತಿಳಿದುಕೊಳ್ಳಬೇಕು. ಯಾಜ್ಞವಲ್ಕ್ಯರನ್ನು ಮಾತ್ರ ಯೋಗೀಶ್ವರರೆಂದು ಕರೆಯಲಾಗುತ್ತದೆ. ಅವರು ಎಲ್ಲ ವೇದಗಳನ್ನೂ ಅರಿತಿದ್ದರು. ಯೋಗ, ಜ್ಞಾನ ಪರಂಪರೆಗಳನ್ನು ನೂರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಭಾರತೀಯ ಸನಾತನ ಧರ್ಮದಲ್ಲಿ ಎಲ್ಲವೂ ಅಡಗಿದೆ. ವೇದಗಳು ಭಗವಂತನ ವಾಣಿಯಾಗಿವೆ. ಸನಾತನಕ್ಕೆ ವೇದಗಳೇ ಮೂಲಾಧಾರವಾಗಿವೆ ಎಂದರು.

ನಮ್ಮ ಸಂವಿಧಾನದಲ್ಲಿ ಯಾಜ್ಞವಲ್ಕ್ಯರ ಸ್ಮೃತಿಯ ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಸಾಮಾನ್ಯರಿಗೂ ತಿಳಿಯುವಂತೆ ಯಾಜ್ಞವಲ್ಕ್ಯರು ತಿಳಿಸಿಕೊಟ್ಟಿದ್ದಾರೆ. ಯಾಜ್ಞವಲ್ಕ್ಯರ ಸ್ಮೃತಿಯಲ್ಲಿ ನಮ್ಮ ನಿತ್ಯ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪರಿಹಾರಗಳನ್ನು ಸೂಚಿಸಲಾಗಿದೆ. ನಾನು- ನನ್ನಿಂದ ಎಂಬ ಭಾವ ಹಾಗೂ ಅಹಮಿಕೆಗಳನ್ನು ಬಿಟ್ಟು ಭಗವಂತನಿಂದಲೇ ಎಲ್ಲವೂ ಎಂಬ ಭಾವನೆ ಮೂಡಿದಾಗ ಜೀವನ ಸಾರ್ಥಕ್ಯವಾಗುತ್ತದೆ. ಈಶಾವಾಸ್ಯದ ಮೂಲಕ ಧಾರ್ಮಿಕ ಸಂಸ್ಕಾರಗಳನ್ನು ತಿಳಿಸಿದ ಯಾಜ್ಞವಲ್ಕ್ಯರು ಜಗತ್ತಿಗೇ ಮಾನ್ಯರಾಗಿದ್ದಾರೆ. ಅವರ ಜಯಂತ್ಯುತ್ಸವದ ಮೂಲಕ ಅವರು ಕೊಟ್ಟಿರುವ ಸಂದೇಶಗಳನ್ನು ಪಾಲಿಸುವಂತಾಗಬೇಕು ಎಂದು ಗುರುದತ್ತ ಚಕ್ರವರ್ತಿಗಳು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಯಾಜ್ಞವಲ್ಕ್ಯ ಅಷ್ಟೋತ್ತರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ರಂಜಿತಾ ಕುಲಕರ್ಣಿ ಪುಸ್ತಕ ಪರಿಚಯಿಸಿದರು. ವೇ.ಮೂ. ಶಂಕರಭಟ್ ಜೋಶಿ, ವೇ.ಮೂ. ಪಂ. ಗಂಗಾಧರಶಾಸ್ತ್ರಿ ಕಾಶೀಕರ, ವೇ.ಮೂ. ಮುಂಕುಂದ ಭಟ್ ಕಾಗಿನೆಲ್ಲಿ ಇದ್ದರು. ನಿವೃತ್ತ ಪ್ರಾಚಾರ್ಯ ಆರ್.ಸಿ. ದೇಸಾಯಿ ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ಕೆ.ಎಲ್. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಡಿ.ಜಿ. ಕುಲಕರ್ಣಿ ನಿರೂಪಿಸಿದರು. ಗಿರೀಶ ದೇಶಪಾಂಡೆ ವಂದಿಸಿದರು.

13 ಕೆಜಿ ಗಾಂಜಾ ವಶ, ಐವರ ಬಂಧನ

ಹಾವೇರಿ: ನಗರದ ನಾಗೇಂದ್ರನಮಟ್ಟಿ ಹೊರವಲಯದ ಶಾಂತಿನಗರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ₹6.99 ಲಕ್ಷ ಮೌಲ್ಯದ 13 ಕೆಜಿ 982 ಗ್ರಾಂ ತೂಕದ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ನಾಗೇಂದ್ರನಮಟ್ಟಿಯ ಯಾಸೀನ್‌ ಅಹ್ಮದ್‌ಜಾಫರ್‌ ನಾಶಿಪುಡಿ, ಗದಗ ತಾಜ್‌ ನಗರದ ಅಬ್ದುಲ್‌ ರೆಹಮಾನ್‌ ಖಾಜಾಸಾಬ್ ಮೈನುದ್ದೀನ ಡಂಬಳ, ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಸಂಜಯ ಛತ್ರದ, ಬ್ಯಾಡಗಿಯ ಕರಾಟೆ ಮಾಸ್ಟರ್‌ ಕಾರ್ತಿಕ ರಮೇಶ ಪೂಜಾರ ಹಾಗೂ ಬ್ಯಾಡಗಿಯ ಶಿವರಾಜ ದೇವೀಂದ್ರಪ್ಪ ಕರೆಮ್ಮನವರ ಬಂಧಿತ ಆರೋಪಿಗಳು. ಇವರಿಂದ 13 ಕೆಜಿ 982 ಗ್ರಾಂ ತೂಕದ ಗಾಂಜಾ, ಒಂದು ಐಫೋನ್‌, ಮಾರುತಿ ಸುಜುಕಿ ಕಾರು ಸೇರಿದಂತೆ ಅಕ್ರಮಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಹಾವೇರಿ ಶಹರ ಠಾಣೆ ಇನ್ಸಪೆಕ್ಟರ್‌ ಮೋತಿಲಾಲ್‌ ಪವಾರ್‌ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.