ಸಾರಾಂಶ
ಸಮಾಜದ ಹಿರಿಯರ ಅಪೇಕ್ಷೆಯಂತೆ ಸೇವಾ ಕಾರ್ಯ ವಿಸ್ತಾರವಾಗಬೇಕು.
ಭಟ್ಕಳ: ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿ ಅಕ್ಷಯ ತೃತೀಯ ದಿನದಂದು ಅದಮ್ಯ ಸಂಕಲ್ಪ ಪ್ರತಿಷ್ಠಾನ ಸಮಿತಿಯನ್ನು ವನವಾಸಿ ಕಲ್ಯಾಣ ಕ್ಷೇತ್ರ ಆಯಾಮ ಪ್ರಮುಖ ಶ್ರೀನಿವಾಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಮಾಜದ ಹಿರಿಯರ ಅಪೇಕ್ಷೆಯಂತೆ ಸೇವಾ ಕಾರ್ಯ ವಿಸ್ತಾರವಾಗಬೇಕು. ಪರಿಣಾಮವಾಗಿ ಸಮಾಜದಲ್ಲಿನ ಕೊರತೆಯನ್ನು ನೀಗಿಸಿ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಅದಮ್ಯ ಸಂಕಲ್ಪ ಪ್ರತಿಷ್ಠಾನ ಯಶಸ್ವಿಯಾಗಬೇಕು. ಸೇವಾಹಿ ಪರಮೋ ಧರ್ಮ ಸಮಿತಿಯ ಈ ಘೋಷ ವಾಕ್ಯದಂತೆ ಸೇವಾ ಶಿಕ್ಷಣ, ಸಂಸ್ಕಾರ ಕ್ಷೇತ್ರದಲ್ಲಿ ಚಟುವಟಿಕೆ ಪ್ರಾರಂಭವಾಗಬೇಕಾದರೆ ಮಕ್ಕಳಿಗೆ ಶಿಶುಮಂದಿರ, ಭಜನಾ ಕೇಂದ್ರ ಮುಂತಾದ ಸಂಸ್ಕಾರದ ಕಾರ್ಯ ಪ್ರಾರಂಭಿಸಬೇಕು. ಈ ಕಾರ್ಯವೇ ಮುಂದೊಂದು ದಿನ ದೊಡ್ಡ ಸಂಸ್ಥೆಯಾಗಿ ರೂಪುಗೊಂಡಿರುವ ಅನೇಕ ಉದಾಹರಣೆಗಳಿಗೆ ಈ ನಿಟ್ಟಿನಲ್ಲಿ ನಾವೆಲ್ಲ ಚಿಂತನೆ ಮಾಡಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇದೆ ಎಂದರು.ವನವಾಸಿ ಕಲ್ಯಾಣ ಪ್ರಾಂತ ಶಿಕ್ಷಣ ಪ್ರಮುಖ ರಾಮಚಂದ್ರ ಮಾತನಾಡಿ, ಸಮಾಜದಲ್ಲಿ ಅನೇಕ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ಸಮಾಜದಲ್ಲಿ ಪರಿವರ್ತನಾ ಕಾರ್ಯದ ವೇಗ ತೀವ್ರವಾಗಬೇಕಾದರೆ ಹೆಚ್ಚಿನ ಪ್ರಮಾಣದ ಸಮಾಜಮುಖಿ ಚಿಂತನೆಯ ವ್ಯಕ್ತಿಗಳನ್ನು ಈ ಕಾರ್ಯದಲ್ಲಿ ಜೋಡಿಸುವ ಅವಶ್ಯಕತೆ ಇದೆ ಎಂದರು.ಆರೋಗ್ಯ ಭಾರತಿ ಜಿಲ್ಲಾ ಪ್ರಮುಖ ದೇವೇಂದ್ರ ದೇವಾಡಿಗ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರಿದ್ದರು.