ಸಾರಾಂಶ
ಸಿಂದಗಿ: ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಹೆಸರು ಪಡೆದ ವಿಜಯಪುರ ದೊಡ್ಡ ಜಿಲ್ಲೆಯಾಗಿದೆ. ಆಡಳಿತದ ದೃಷ್ಟಿಯಿಂದ ವಿಜಯಪುರ ವಿಭಜಿಸಿ ಒಂದು ಹೊಸ ಜಿಲ್ಲೆಯ ಕೂಗು ಕೇಳುತ್ತಿದೆ. ವಿಜಯಪುರ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೇ ಸಿಂದಗಿ ತಾಲೂಕು ಹೊಸ ಜಿಲ್ಲೆಯಾಗಲಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲೆ ಹಾಗೂ ಸಿಂದಗಿ ತಾಲೂಕು ಘಟಕಗಳ ಮೂಲಕ ಅಗ್ರಹಿಸಲಾಗುತ್ತಿದೆ ಎಂದು ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ವೈ.ಸಿ ಮಯೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಂದಗಿ ತಾಲೂಕು ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಜನಸಂಖ್ಯೆಯಲ್ಲಿ ದೊಡ್ಡದಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಆರ್ಟಿಒ ಕಚೇರಿಯಲ್ಲಿ ವಾಹನ ನೋಂದಣಿಯಲ್ಲಿ ಸಿಂದಗಿ ಮುಂದಿದೆ. ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿದೆ. ಈ ಎಲ್ಲಾ ವಿಷಯಗಳನ್ನು ಸರ್ಕಾರ ಪರಿಗಣಿಸಿ ಸಿಂದಗಿ ತಾಲೂಕು ನೂತನ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ತಾಲೂಕು ಸಂಚಾಲಕ ಶರಣು ಛಲವಾದಿ, ಸಂಘಟನಾ ಸಂಚಾಲಕ ನೀಲಕಂಠ ಹೊಸಮನಿ, ಶಿವಪುತ್ರ ಮೇಲಿನಮನಿ, ಪರಶುರಾಮ ಹೊಸಮನಿ, ಜೈಭೀಮ ತಳಕೇರಿ, ಸುನೀಲ ಸುಂಗಠಾಣ ಪತ್ರಿಕಾ ಹೇಳಿಕೆ ನೀಡಿದ್ದಾರೆ.