ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶ್ವದಾದ್ಯಂತ ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಪಟ್ಟ ಸಂಶೋಧನೆಯ ಕುರಿತು ಸಂಯುಕ್ತವಾಗಿ ಕೈಗೊಳ್ಳಬಹುದಾದ ಯೋಜನೆಗಳ ಪ್ರಾಮುಖ್ಯತೆ ಬಗ್ಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ಫಿನ್ಲ್ಯಾಂಡ್ ನ ನಾರ್ವಿಕ್ ಕೇಂದ್ರದ ಅಧ್ಯಕ್ಷ ಪ್ರೊ.ಮಿಕ್ಕೊ ರುಹೋನೆನ್ ಪ್ರತಿಪಾದಿಸಿದರು.ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಆಯೋಜಿಸಿರುವ ಸಮೃದ್ಧಿ ಮತ್ತು ಪೌಷ್ಟಿಕೌಂಶಗಳ ಭದ್ರತೆಗಾಗಿ ಸ್ಮಾರ್ಟ್ ತೋಟಗಾರಿಕೆ ತಂತ್ರಜ್ಞಾನ ಜಾಗತಿಕ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸ್ಮಾರ್ಟ್ ತೋಟಗಾರಿಕೆ ಇಂದಿನ ಆದ್ಯತೆಯಾಗಿದ್ದು, ಈ ದಿಸೆಯಲ್ಲಿ ಕೈಗೊಳ್ಳಲಾದ ಪ್ರಮುಖ ಯೋಜನೆಗಳನ್ನು ಸಂಸ್ಥೆಗಳ ವಿಜ್ಞಾನಿಗಳು, ವಿದ್ಯಾರ್ಥಿಗಳು ಸಂಸ್ಥೆಗಳ ಭೇಟಿಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ತೋ.ವಿ.ವಿ. ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಫಿನ್ಲ್ಯಾಂಡ್ ದೇಶದ ಭೇಟಿಯ ಕ್ಷಣಗಳನ್ನು ನೆನಪಿಸಿಕೊಂಡರು.ಅಧ್ಯಕ್ಷತೆ ವಹಿಸಿದ್ದ ತೋ.ವಿ.ವಿ ಕುಲಪತಿ ಡಾ.ವಿಷ್ಣುವರ್ಧನ್ ಮಾತನಾಡಿ, ತೋಟಗಾರಿಕೆ ವಿಜ್ಞಾನಗಳ ಸ್ಮಾರ್ಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಲಹೆ ನೀಡಿದ ಅವರು, ದೇಶ-ವಿದೇಶಗಳಿಂದ ಆಗಮಿಸಿರುವ ಗಣ್ಯರಿಗೆ, ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಸಮ್ಮೇಳನ ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳಬಹುದಾದ ಇತ್ತೀಚಿನ ಸಂಶೋಧನಾ ಫಲಿತಾಂಶಗಳು, ಮುಂದೆ ಕೈಗೊಳ್ಳಬಹುದಾದ ಸಂಶೋಧನೆಗಳ ಬಗ್ಗೆ ಚರ್ಚಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. ತೋ.ವಿ.ವಿ. ಸಂಸ್ಥಾಪಕ ಕುಲಪತಿ ಡಾ.ಎಸ್.ಬಿ. ದಂಡಿನ ತೋಟಗಾರಿಕೆ ವಿವಿಧ ಬೆಳೆಗಳ ಜೈವಿಕ ವೈವಿಧ್ಯತೆಯ ಮಹತ್ವ, ಸಂರಕ್ಷಣೆ ಹಾಗೂ ಅವುಗಳ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.
ಪಿನ್ಲ್ಯಾಂಡ್ನ ಡಾ. ಕ್ರಿಸ್ಟೇಬಲ್ ರಾಯನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.ನವದೆಹಲಿಯ ಭಾ.ಕೃ.ಅ.ಸಂ. ಪರಿಷತ್ ನ ನಿವೃತ್ತ ಸಹಾಯಕ ನಿರ್ದೇಶಕ ಡಾ.ಟಿ. ಜಾನಕಿರಾಮ, ತೋ.ವಿ.ವಿ. ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಎನ್. ವಾಸುದೇವನ್, ಎಚ್.ಜೆ. ಮನೋಹರ್ ಮಾತನಾಡಿದರು.
ಇದೇ ವೇಳೆ ವಿವಿಧ ವಿಜ್ಞಾನಿಗಳ ಸಂಶೋಧನಾ ಫಲಿತಾಂಶಗಳ ಪ್ರಕಟಣೆಗಳಾದ ಅಬ್ ಸ್ಟ್ರ್ಯಾಕ್ಟ್, ಕೀ-ನೋಟ್, ಲೀಡ್ ಟ್ರ್ಯಾಕ್ಸ್ಗಳ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ದೇಶ ವಿದೇಶಗಳ ಸುಮಾರು 1050ಕ್ಕೂ ಅಧಿಕ ವಿಜ್ಞಾನಿಗಳು ಆಫ್ಲೈನ್/ಆನ್ಲೈನ್ ಮೂಲಕ ಭಾಗವಹಿಸಿದ್ದರು.ನ್ಯಾಷನಲ್ ಗ್ಲ್ಯಾಡಿಯೋಲಸ್ ಟ್ರಸ್ಟ್, ಜಮ್ಮು, ಕಾಶ್ಮೀರ ವತಿಯಿಂದ ಕೃಷಿ/ತೋಟಗಾರಿಕೆ ವಿವಿಧ ವಿಷಯಗಳಲ್ಲಿ ಸಾಧನೆಗೈದ ವಿಜ್ಞಾನಿಗಳಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಆಡಳಿತ ಮಂಡಳಿ ಸದಸ್ಯರಾದ ಡಾ.ಅನಿತಾ, ಮಹಾಂತೇಶಗೌಡ ಪಾಟೀಲ, ಡಾ.ತಮ್ಮಯ್ಯ ಎನ್. ಹಾಗೂ ಡಾ.ಮನೋಜ, ನಾಜೀರ್, ಮಂಜುನಾಥರೆಡ್ಡಿ, ಡಿಡಿಎಂ ನಬಾರ್ಟ್ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ಮಹಾವಿದ್ಯಾಲಯಗಳ ಡೀನ್ ಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಸಂಶೋಧನಾ ವಿದ್ವಾಂಸರು, ಉದ್ಯಮಿಗಳು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದರು.ಡಾ.ಬಾಲಾಜಿ ಎಸ್. ಕುಲಕರ್ಣಿ ಸ್ವಾಗತಿಸಿ ಪರಿಚಯಿಸಿದರು. ಡಾ.ಸರ್ವಮಂಗಳ ಚೋಲಿನ ಹಾಗೂ ಡಾ.ಮಹಾಂತೇಶ ನಾಯಕ್ ಬಿ.ಎನ್. ನಿರೂಪಿಸಿದರು. ಸಮ್ಮೇಳನದ ಸಂಘಟನೆ ಅಧ್ಯಕ್ಷ ಹಾಗೂ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ. ಹೆಗಡೆ ವಂದಿಸಿದರು.