ಧಾರವಾಡ:
ವಿಕಲಚೇತನ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿ ಬರಬೇಕು. ಇಂತಹ ಮಕ್ಕಳಿಗೆ ವಿಶೇಷ ತರಬೇತಿ ಹಾಗೂ ಶಿಕ್ಷಣ ದೊರೆತಾಗ ಅವರ ಅಲೋಚನ ಶಕ್ತಿಯೇ ಬದಲಾಗುತ್ತದೆ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಲಗಿ ಹೇಳಿದರು.ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಆಶ್ರಯದಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ವಿಶೇಷ ಚೇತನ ಮಕ್ಕಳ ಸಬಲೀಕರಣಕ್ಕೆ ಶಾಲೆ ಮತ್ತು ಸಮೂದಾಯದ ಪಾತ್ರ ಕಾರ್ಯಾಗಾರ ಉದ್ಘಾಟಿಸಿದ ಅವರು, ವಿಕಲಚೇತನ ಮಕ್ಕಳಲ್ಲಿ ಪ್ರತಿಭಾವಂತರಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತಿಳಿವಳಿಕೆ ಮೂಡಿಸಿದರೆ ಎಲ್ಲ ರಂಗದಲ್ಲಿಯು ಯಶಸ್ಸು ಸಾಧಿಸಲಿದ್ದಾರೆ ಎಂದರು.
ಫಿಜಿಯೋಥೆರಪಿ ವೈದ್ಯ ಸುಜಾತ ನಾಯಕ್ ಮಾತನಾಡಿ, ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಅವರು ಕೆಲ ಸಮಸ್ಯೆ ಎದುರಿಸುತ್ತಾರೆ. ಅವುಗಳ ನಿವಾರಣೆಗೆ ನಾವು ಮುಂದಾಗಬೇಕು ಎಂದು ಹೇಳಿದರು.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ.ಎಫ್., ವಿಕಲತೆ ಶಾಪವಲ್ಲ, ಅದೊಂದು ಸವಾಲಾಗಿ ಸ್ವೀಕರಿಸಿ ಮಕ್ಕಳ ಆರೋಗ್ಯದ ಜತೆಗೆ ಶಿಕ್ಷಣ ನೀಡಬೇಕಾದದ್ದು ಪಾಲಕರ ಕರ್ತವ್ಯ ಎಂದರು.
ಫೋರ್ಥ್ ವೇವ್ ಫೌಂಡೇಶನ್ ಮುಖ್ಯಸ್ಥ ಬಸವರಾಜ್ ಮ್ಯಾಗೇರಿ, ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಗೋಪಾಲ ಸೊನ್ನಹಳ್ಳಿ, ಪ್ರಾಚಾರ್ಯ ಡಾ. ರವಿಕುಮಾರ ಬಾರಾಟಾಕ್ಕೆ, ಲಲಿತ ಹೊನ್ನವಾಡ, ನಬೀಸಾಬ್ ಮುದ್ದೇಬಿಹಾಳ, ವಿದ್ಯಾ ಮ್ಯಾಗೇರಿ, ಪುಷ್ಪಾ ಮಾನೆ, ಪ್ರಭಾವತಿ ಕವಳಿ, ಅಕ್ಷತಾ ಪೂಜಾರ ಇದ್ದರು.