ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲಿ: ಪ್ರಭುಸ್ವಾಮೀಜಿ

| Published : Apr 23 2024, 12:53 AM IST

ಸಾರಾಂಶ

ಶಿಬಿರದ ಅವಧಿಯಲ್ಲಿ ಮಕ್ಕಳು ತರಬೇತಿ ಪಡೆದು ತಯಾರಿಸಿದ ಕರಕುಶಲ ವಸ್ತುಗಳು ನೋಡುಗರ ಮೆಚ್ಚುಗೆಯನ್ನು ಗಳಿಸುತ್ತಿವೆ.

ಸಂಡೂರು: ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಜೀವನ್ ಸಂಗೀತ್ ಸಂಸ್ಥೆಯಿಂದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಶುಕ್ರವಾರ ಜರುಗಿತು.ಸಮಾರೋಪ ಸಮಾರಂಭದಲ್ಲಿ ಶ್ರೀಮಠದ ಪ್ರಭುಸ್ವಾಮೀಜಿ ಮಾತನಾಡಿ, ಜೀವನ್ ಸಂಗೀತ್ ಸಂಸ್ಥೆ 10 ದಿನಗಳ ಕಾಲ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹಲವು ರೀತಿಯ ತರಬೇತಿಯನ್ನು ನೀಡಿ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ, ಹೊರತರಲು ಶ್ರಮಿಸಲಾಗಿದೆ. ಮಕ್ಕಳು ಶಿಬಿರದಲ್ಲಿ ಪಡೆದ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೂಜಿದಾರ ಕಲಾ ಕುಶಲ ಕೇಂದ್ರದ ಮಾಲೀಕರಾದ ನಿರ್ಮಲಾ ಶಿವಕುಮಾರ್ ಮಾತನಾಡಿ, ಶಿಬಿರದ ಅವಧಿಯಲ್ಲಿ ಮಕ್ಕಳು ತರಬೇತಿ ಪಡೆದು ತಯಾರಿಸಿದ ಕರಕುಶಲ ವಸ್ತುಗಳು ನೋಡುಗರ ಮೆಚ್ಚುಗೆಯನ್ನು ಗಳಿಸುತ್ತಿವೆ. ಮಕ್ಕಳು ತಾವು ಕಲಿತ ಕಲೆಯನ್ನು ಮುಂದುವರೆಸಿ, ಅದರಲ್ಲಿ ಪ್ರಾವೀಣ್ಯ ಗಳಿಸಿಕೊಳ್ಳಬೇಕು ಎಂದರು.

ಜೀವನ್ ಸಂಗೀತ್ ಸಂಸ್ಥೆಯ ಅಧ್ಯಕ್ಷೆ ಗೀತಾ ವೀರೇಶ್ ಮಾತನಾಡಿ, 10 ದಿನಗಳ ಶಿಬಿರದಲ್ಲಿ ಸಂಸ್ಥೆಯ ಪ್ರಿಯಾ ಪ್ರಕಾಶ್ ಅವರಿಂದ ಮಂಡಲ ಆರ್ಟ್, ಜಿಂದಾಲ್‌ನ ಪೂನಂ ಜಾ ಅವರಿಂದ ಮಕ್ಕಳಿಗೆ ಬೇಸಿಗೆಯಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು. ಉಡುಪಿಗೆ ತಕ್ಕಂತೆ ಕೇಶವಿನ್ಯಾಸ ಮುಂತಾದ ಅಂಶಗಳನ್ನು ತಿಳಿಸಿಕೊಡಲಾಯಿತು. ಕಲಾ ಶಿಕ್ಷಕರಾದ ಅನಿಲ್ ಅವರಿಂದ ಮೆಹಂದಿ ಕಲೆ, ಪೇಂಟಿಂಗ್ ಕುರಿತು ತರಬೇತಿ ಕೊಡಿಸಲಾಯಿತು.

ಮಕ್ಕಳನ್ನು ಜಿಂದಾಲ್ ಏರ್‌ಪೋರ್ಟ್ಗೆ ಕರೆದುಕೊಂಡು ಹೋಗಿ, ಅವರಿಗೆ ಅಲ್ಲಿನ ಪ್ರೈವೇಟ್ ಜೆಟ್ ವಿಮಾನಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಕಲ್ಪಿಸಿಕೊಡಲಾಯಿತು. ದಂತ ವೈದ್ಯರಾದ ಡಾ.ನಯನಾ ಅವರಿಂದ ಮಕ್ಕಳ ಹಲ್ಲುಗಳ ತಪಾಸಣೆ ನಡೆಸಲಾಯಿತಲ್ಲದೆ, ಅವುಗಳ ರಕ್ಷಣೆ ಕುರಿತು ಮಾಹಿತಿ ನೀಡಲಾಯಿತು.

ಮೇಘನಾ ಭಟ್ ಅವರಿಂದ ಅಬಾಕಸ್, ವೇದಿಕ್ ಗಣಿತ, ಗೌರಿಬಾಯಿ ಹಾಗೂ ರೇಖಾರಿಂದ ಲಂಬಾಣಿ ವರ್ಕ್ ಕುರಿತು ತರಬೇತಿ ಕೊಡಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಮೆಹಬೂಬ್ ಬಾಷ ಹಾಗೂ ದಿವಾಕರ್ ಅವರಿಂದ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ಕೊಡಿಸಲಾಗಿದೆ. ಮಕ್ಕಳು ಮತ್ತು ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ವಿವರಿಸಿದರು.

ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಸರ್ಟಿಫಿಕೇಟ್‌ಗಳನ್ನು ಸಂಸ್ಥೆ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ಜೀವನ್ ಸಂಗೀತ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.