ಸಾರಾಂಶ
ವಿದ್ಯಾರ್ಥಿಗಳು ಜೀವನದಲ್ಲಿ ಛಲ, ಗುರಿ ಇಟ್ಟುಕೊಂಡು ಅಭ್ಯಾಸ ಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಸ್ಥಳೀಯ ಮಂಜುನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಯಲಬುರ್ಗಾ: ವಿದ್ಯಾರ್ಥಿಗಳು ಜೀವನದಲ್ಲಿ ಛಲ, ಗುರಿ ಇಟ್ಟುಕೊಂಡು ಅಭ್ಯಾಸ ಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಸ್ಥಳೀಯ ಮಂಜುನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸರಸ್ವತಿ ಪೂಜಾ ಹಾಗೂ ೨೦೨೩-೨೪ನೇ ಸಾಲಿನ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಾಸಾದರೆ ಸಾಲದು, ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.ಶಾಸಕ ಬಸವರಾಜ ರಾಯರಡ್ಡಿ ಈ ಕಾಲೇಜಿಗೆ ಸಾಕಷ್ಟು ಉಪನ್ಯಾಸಕರು, ಕೊಠಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಕೊಡುವ ಜತೆಗೆ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಕಾಲೇಜು, ಕೌಶಲ್ಯಾಭಿವೃದ್ಧಿ ಕೇಂದ್ರ, ೮ ಹೊಸ ಸರ್ಕಾರಿ ಪ್ರೌಢ ಶಾಲೆ, ೩ ಪದವಿ ಕಾಲೇಜು, ೨ಮೊರಾರ್ಜಿ, ಡಿಗ್ರಿ ಕಾಲೇಜು, ಐಟಿಐ ಕಾಲೇಜು ಸೇರಿದಂತೆ ಅತಿ ಹೆಚ್ಚು ಮೊರಾರ್ಜಿ ವಸತಿ ಶಾಲೆ ಹೊಂದುವ ಮೂಲಕ ಈ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ಹೊಂದಿದ ಮಾದರಿ ತಾಲೂಕನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಹೊಸಪೇಟೆ ನಗರ ಪೊಲೀಸ್ ಠಾಣೆಯ ಸಿಪಿಐ ಬಾಳನಗೌಡ ಎಸ್.ಮಾನಶೆಟ್ಟರ್ ಮಾತನಾಡಿ, ನಾನು ಕೂಡ ಈ ಕಾಲೇಜಿನಲ್ಲಿ ಓದಿದ ಹಳೇ ವಿದ್ಯಾರ್ಥಿ. ಉಪನ್ಯಾಸಕರು, ತಂದೆ, ತಾಯಿ ಹೇಳಿದ ಮಾತನ್ನು ತಪ್ಪದೇ ಪಾಲಿಸಿ ನಿರಂತರ ಅಭ್ಯಾಸದಿಂದ ಹೆಚ್ಚು ಅಂಕಗಳನ್ನು ಪಡೆದುಕೊಂಡು ಉನ್ನತ ಹುದ್ದೆಗೆ ಸೇರಬೇಕು ಎಂದರು.ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಸಿದ್ದನಗೌಡ ಬನ್ನಪ್ಪಗೌಡ್ರ ಹಾಗೂ ಹಂಪಯ್ಯ ಹಿರೇಮಠ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಶರಣಪ್ಪ ಬೇಲೇರಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಕಾಲೇಜು ಸಿಡಿಸಿ ಸದಸ್ಯರಾದ ಚಂದ್ರಪ್ಪ ದೊಡ್ಮನಿ, ಭಾಗೀರಥಿ ಜೋಗಿನ್, ಮುಖ್ಯೋಪಾಧ್ಯಾಯ ದುರಗಪ್ಪ, ಉಪನ್ಯಾಸಕ ಶಿವಪ್ಪ ಬೇಲೇರಿ, ಶರಣಪ್ಪ ಉಳ್ಳಾಗಡ್ಡಿ, ಭೀರಪ್ಪ ಕುರಿ, ಬಾಳಪ್ಪ ಹಡಪದ ಸೇರಿದಂತೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.