ವಿದ್ಯಾರ್ಥಿಗಳು ಲಲತಕಲೆಯ ಆಸ್ವಾದನೆಯ ಜತೆಗೆ ಉತ್ತಮ ಅಭಿರುಚಿಯ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಹೊನ್ನಾವರ ಎಸ್ಡಿಎಂ ಕಾಲೇಜಿನಲ್ಲಿ ಕೈಬರಹ ಪತ್ರಿಕೆ ಬಿಡುಗಡೆ
ಕನ್ನಡಪ್ರಭ ವಾರ್ತೆ ಹೊನ್ನಾವರವಿದ್ಯಾರ್ಥಿಗಳು ಲಲತಕಲೆಯ ಆಸ್ವಾದನೆಯ ಜತೆಗೆ ಉತ್ತಮ ಅಭಿರುಚಿಯ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕುಮಟಾದ ಡಾ. ಎ.ವಿ. ಬಾಳಿಗಾ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಲೋಕೇಶ ಹೆಗಡೆ ಹೇಳಿದರು.ಇಲ್ಲಿನ ಎಸ್ಡಿಎಂ ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈ ಬರಹ ಪತ್ರಿಕೆ "ಬ್ಲೂಮ್ " ಬಿಡುಗಡೆಗೊಳಿಸಿ ಮಾತನಾಡಿದರು.
ಪರಸ್ಪರ ದ್ವೇಷ, ಯುದ್ಧ ಮೊದಲಾದ ಕಾರಣಗಳಿಂದ ಜಗತ್ತಿನಲ್ಲಿ ದ್ವೇಷಮಯ ವಾತಾವರಣವಿದ್ದು, ಬದುಕಿನ ಸಂಕೀರ್ಣತೆ ಅನುಭವಿಸುತ್ತಿರುವ ಮನುಷ್ಯನಲ್ಲಿ ಸಂಗೀತ, ನೃತ್ಯ ಸೇರಿದಂತೆ ವಿವಿಧ ಲಲಿತ ಕಲೆಗಳ ಆಸ್ವಾದನೆ ಅಗತ್ಯ. ಉತ್ತಮ ಅಭಿರುಚಿಯ ಸಾಹಿತ್ಯದ ಓದು ಮಾನವೀಯತೆ ಬೆಳೆಸುವ ಜತೆಗೆ ಆತನ ಮನಸ್ಸಿಗೆ ಅಗತ್ಯ ನೆಮ್ಮದಿ ನೀಡಬಲ್ಲವು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಜಿ.ಎನ್. ಭಟ್ಟ ಮಾತನಾಡಿ, ಮೊಬೈಲ್ ಬಳಕೆ ಹೆಚ್ಚಿದಂತೆ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದೆ. ಜ್ಞಾನ ಸಂಪಾದನೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಲೋಕೇಶ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಗಿರೀಶ ಪ್ರಾರ್ಥನಾಗೀತೆ ಹಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಉಪನ್ಯಾಸಕಿ ಬಿಂದು ಅವಧಾನಿ, ಸಂಜನಾ ಆಚಾರಿ, ದೀಪಕ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಕೆ.ಆರ್. ಶ್ರೀಲತಾ ಸನ್ಮಾನ ಪತ್ರ ವಾಚಿಸಿದರು. ವೈಶಾಲಿ ಗೌಡ ವಂದಿಸಿದರು.