ಸಾರಾಂಶ
ಹುಬ್ಬಳ್ಳಿ: ಉದ್ಯಮ ಮತ್ತು ಉದ್ಯೋಗ ಮಾರುಕಟ್ಟೆಗೆ ಕೌಶಲ್ಯ ಹೊಂದಿದ ಯುವಕರು ಅಗತ್ಯವಿದ್ದು. ಅಭ್ಯರ್ಥಿಗಳು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ಅಧ್ಯಕ್ಷ ಬಾಪುಗೌಡ ಬಿರಾದಾರ್ ಹೇಳಿದರು.
ಇಲ್ಲಿಯ ಐಇಎಂಎಸ್ ಎಂಬಿಎ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಂಥನ್-2025 ಇಂಟರ್ ಅಂತರ ಕಾಲೇಜು ಉತ್ಸವ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಮಾತನಾಡಿ, ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟನೆ, ಸಂವಹನ, ಕಲಿಕಾ ಕೌಶಲ್ಯ ವೃದ್ಧಿಯಾಗುತ್ತದೆ. ನವೀನ ಕಲ್ಪನೆಯೊಂದಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವತ್ತ ಗಮನಹರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಹಣಕಾಸು, ಅತ್ಯುತ್ತಮ ವ್ಯವಸ್ಥಾಪಕ, ಬಿ-ಐಡಿಯಾಟಿಕ್, ರಸಪ್ರಶ್ನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.20 ತಂಡಗಳಲ್ಲಿ ಸುಮಾರು 180 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಣಕಾಸು ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಹುಬ್ಬಳ್ಳಿಯ ಸಮರ್ಥ ಪದವಿ ಕಾಲೇಜು, ಜೈನ್ ಪದವಿ ಕಾಲೇಜು ದ್ವಿತೀಯ, ಮಾನವ ಸಂಪನ್ಮೂಲ ಕಾರ್ಯಕ್ರಮದಲ್ಲಿ ಕೆಎಲ್ಇ ವ್ಯವಹಾರ ಆಡಳಿತ ಕಾಲೇಜು ಪ್ರಥಮ, ಜೈನ್ ಕಾಲೇಜು ದ್ವಿತೀಯ, ಮಾರ್ಕೆಟಿಂಗ್ ಕಾರ್ಯಕ್ರಮದಲ್ಲಿ ಕೆಎಲ್ಇ ವಾಣಿಜ್ಯ ಪ್ರಥಮ, ಕೆಎಲ್ಇ ಬಿಬಿಬಿಎ ದ್ವಿತೀಯ ಸ್ಥಾನ ಮತ್ತು ಬಿ ಪ್ಲಾನ್ನಲ್ಲಿ ಕೆಎಲ್ಇ ವಾಣಿಜ್ಯ ಪ್ರಥಮ ಸ್ಥಾನ,- ಕೆಎಲ್ಇ ವ್ಯವಹಾರ ಆಡಳಿತ ಕಾಲೇಜು ದ್ವಿತೀಯ ಸ್ಥಾನ, ಅತ್ಯುತ್ತಮ ವ್ಯವಸ್ಥಾಪಕ ಐಬಿಎಂಆರ್ ಕಾಲೇಜು ಪ್ರಥಮ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಕೆಎಲ್ಇ ವಾಣಿಜ್ಯ ಕಾಲೇಜು ದ್ವಿತೀಯ, ಧಾರವಾಡ ಜೆಎಸ್ಎಸ್ ಬನಶಂಕರಿ ಕಾಲೇಜು ತೃತೀಯ ಸ್ಥಾನ ಪಡೆದವು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜೇತರಿಗೆ ಪೂಜಾ ಚರಂತಿಮಠ ಮತ್ತು ಪ್ರಭು ಚರಂತಿಮಠ ಅವರು ಟ್ರೋಫಿಗಳನ್ನು ವಿತರಿಸಿದರು. ಚಂದ್ರಿಕಾ ಅರ್ಕಸಾಲಿ ಸ್ವಾಗತಿಸಿದರು. ಸ್ನೇಹಾ ನಾಯಕ್ ಸ್ವಾಗತ ಗೀತೆ ಹಾಡಿದರು. ಪ್ರೊ. ಪ್ರೀತಿ ಬೆಳಗಾಂವ್ಕರ್ ಮತ್ತು ಪ್ರೊ. ಜಯರಾಜ್ ಗಡ್ಡಿಹಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಸೋನಾಲಿ ಕೋಲಿ ನಿರ್ವಹಿಸಿದರು. ರಮ್ಯಾ ಮೇಟಿ ವಂದಿಸಿದರು.