ಸಾರಾಂಶ
ಶಿಕ್ಷಣ ಕ್ಷೇತ್ರ ಈ ಮೊದಲಿಗಿಂತಲೂ ಇಂದು ಸಾಕಷ್ಟು ಸುಧಾರಣೆಯಾಗಿದೆ, ಜತೆಗೆ ಸೌಲಭ್ಯಗಳೂ ಹೆಚ್ಚಾಗಿವೆ
ಮುಳಗುಂದ: ವಿದ್ಯಾರ್ಥಿಗಳು ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯಬೇಕು, ಸ್ವಾವಲಂಬನೆಯ ಬದುಕಿಗೆ ಪರಿಶ್ರಮದ ಓದು, ಮನನ, ಗೃಹಿಕೆ ಅವಶ್ಯ ಎಂದು ವೈದ್ಯೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು.
ಅವರು ಸಮೀಪದ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಗದಗ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪಂಚಸೂತ್ರಗಳಾದ ಸಮಯ ಪ್ರಜ್ಞೆ,ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಇವುಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಬೆಳೆಯುವ ಹಂತದಲ್ಲೇ ಅಳವಡಿಸಿಕೊಂಡರೆ ಬದುಕು ಸುಂದರವಾಗಿ ರೂಪುಗೊಳ್ಳುವದು. ತಂದೆ ತಾಯಿಗಳು ನಿಜವಾದ ದೇವರು ಇವರನ್ನು ನಾವು ಪೂಜಿಸಿ ಗೌರವಿಸಬೇಕು.ವೃದ್ದಾಪ್ಯದಲ್ಲಿ ಅವರಿಗೆ ಆಸರೆಯಾಗಿ ನಿಲ್ಲಬೇಕು ಎಂದರು.
ಡಾ.ಸಾಧಿಕಾ ನೂರಾನಿ ಮಾತನಾಡಿ, ಶಿಕ್ಷಣ ಕ್ಷೇತ್ರ ಈ ಮೊದಲಿಗಿಂತಲೂ ಇಂದು ಸಾಕಷ್ಟು ಸುಧಾರಣೆಯಾಗಿದೆ, ಜತೆಗೆ ಸೌಲಭ್ಯಗಳೂ ಹೆಚ್ಚಾಗಿವೆ ಇವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮುನ್ನಡೆ ಸಾಧಿಸಬೇಕೆಂದರು.ಈ ವೇಳೆ ಕಾವ್ಯಾ ರಂಗನಗೌಡ್ರ, ಗೌತಮ್ ಪೂಜಾರ, ಆಶೀಫ್ಅಲಿ ನದಾಫ, ಆಫ್ರೀನ್ ಶಲವಡಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಪಿ. ಗೋಲಪ್ಪನವರ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ, ಉಪಾಧ್ಯಕ್ಷ ಶಂಕ್ರಪ್ಪ ಅಣ್ಣಿಗೇರಿ, ಕಾರ್ಯದರ್ಶಿ ಶಿವಾನಂದ ಕತ್ತಿ, ನೇಹಾ ಹಾಗೂ ಶಶಿಕಲಾ ಇದ್ದರು. ಶ್ರೀದೇವಿ ಮಡಿವಾಳರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎ.ಎ. ಬಂಡಿವಾಡಮಠ ಸ್ವಾಗತಿಸಿದರು. ಜ್ಯೋತಿ ಚಲವಾದಿ ನಿರೂಪಿಸಿದರು. ವಿ.ಎಂ. ಖ್ಯಾಡದ ವಂದಿಸಿದರು.