ಹೊನ್ನಾವರ: ವಿದ್ಯಾರ್ಥಿಗಳೇ ನಿಜವಾದ ಸಮಾಜ. ಮುಂದಿನ ಹತ್ತು ಹದಿನೈದು ವರ್ಷಗಳ ನಂತರ ನಿಮ್ಮನ್ನು ಸಮಾಜದ ಮುಖ್ಯವಾಹಿನಿಯಲ್ಲಿ ನೋಡುತ್ತೇವೆ. ವಿದ್ಯಾರ್ಥಿಗಳು ತಾವು ಹುಟ್ಟಿದ ಊರಿನಲ್ಲಿ ತಂದೆ ತಾಯಿಯ ಜೊತೆ ಇದ್ದು ಅಲ್ಲಿಯೇ ಸಾಧನೆ ಮಾಡಿ. ಜ್ಞಾನವನ್ನು ಎಲ್ಲಿಂದಾದರೂ ಪಡೆದುಕೊಳ್ಳಿ. ಆದರೆ, ತಾವು ಹುಟ್ಟಿದ ಊರಿನಲ್ಲಿಯೇ ದುಡಿಯುವ ಕೆಲಸವನ್ನು ಮಾಡುವಂತಾಗಲಿ ಎಂದು ಉದ್ಯಮಿಗಳಾದ ಮಂಜುನಾಥ್ ಜಿ. ಭಟ್ ಸುವರ್ಣಗದ್ದೆ ಹೇಳಿದರು.
ಪಟ್ಟಣದ ಎಂ.ಪಿ.ಇ. ಸೊಸೈಟಿಯ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ಪಿ.ಇ. ಸೊಸೈಟಿಯ ಸಮೂಹ ಸಂಸ್ಥೆಗಳ ಪ್ರತಿಭೋತ್ಸವ ೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜಕ್ಕೆ ಏನು ಬೇಕು ಎನ್ನುವುದನ್ನು ಅರಿತರೆ ಒಳಿತಾಗುತ್ತದೆ. ನಾವು ಕುರುಡಾಗಿ ಯಾವುದನ್ನು ಒಪ್ಪಬಾರದು. ಮಕ್ಕಳು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಎಲ್ಲೂ ಇಲ್ಲದೆ ಇದ್ದದ್ದನ್ನು ನಾವು ಗಳಿಸಲು ಪ್ರಯತ್ನಿಸಬೇಕು. ತಮ್ಮ ಸಾಮರ್ಥ್ಯ ಗುರುತಿಸಿಕೊಂಡು ಮುಂದುವರಿಯಬೇಕು. ಕೇವಲ ಎಸಿ ಕೊಠಡಿಯೊಳಗೆ ಕುಳಿತು ದುಡಿಯುವುದನ್ನು ಆಲೋಚಿಸುವುದರೊಟ್ಟಿಗೆ ಕೃಷಿಯ ಬಗ್ಗೆಯೂ ಆಲೋಚಿಸಬೇಕು. ಯಾವ ಕೆಲಸವೂ ಕನಿಷ್ಟವಲ್ಲ. ಇದನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಓದುವ ಮಷಿನ್ ಮಾಡಬೇಡಿ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ. ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸನ್ಮಾನಿಸುವಾಗ ಆಗುವ ಸಂತೋಷ ಹೆಚ್ಚಿರುತ್ತದೆ. ಇಂತಹ ಸನ್ಮಾನಗಳು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಹೆಚ್ಚು ಖುಷಿಯನ್ನು ತರುತ್ತದೆ. ವಿದ್ಯಾರ್ಥಿಗಳು ಸಮಾಜಕ್ಕೆ ಉಪಯೋಗ ಆಗುವಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ನೊಂದವರಿಗೆ ಸಹಾಯವನ್ನು ಮಾಡುವ ಗುಣಬೆಳಸಿಕೊಳ್ಳಿ. ಸಾಧನೆಯೆಂದರೆ ಕೇವಲ ನಾವು ತೆಗೆದುಕೊಳ್ಳುವ ಅಂಕಗಳಿಗೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳಸಿಕೊಳ್ಳಿ ಎಂದರು.ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷ ನಾಗರಾಜ್ ಕಾಮತ್, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎನ್. ಭಟ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಭಟ್, ಸೆಂಟ್ರಲ್ ಶಾಲೆಯ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ಎಂ ನಾಯ್ಕ, ಡಾ. ಎಂ.ಪಿ. ಕರ್ಕಿ ಇನ್ಸಿಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಇದರ ನಿರ್ದೇಶಕ ಡಾ. ಶಿವರಾಮ ಶಾಸ್ತ್ರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಉದ್ಯೋಗ ನಿಯೋಜನಾಧಿಕಾರಿ ಡಾ. ಡಿ.ಎಲ್. ಹೆಬ್ಬಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಎಂ.ಪಿ.ಇ. ಸೊಸೈಟಿ ಸಮೂಹ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಸಾಧನೆಯನ್ನು ಮಾಡಿದ ೯೩ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕಿ ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಕಾರ್ಯದರ್ಶಿ ಎಸ್.ಎಂ. ಭಟ್ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಜಿ.ಪಿ. ಹೆಗಡೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪದವಿ ಪ್ರಾಚಾರ್ಯ ಡಾ. ಜಿ.ಎನ್. ಭಟ್ ವಂದಿಸಿದರು. ಉಪನ್ಯಾಸಕ ಪ್ರಶಾಂತ್ ಹೆಗಡೆ, ತೇಜಸ್ವಿನಿ ಹೆಗಡೆ ನಿರೂಪಿಸಿದರು.