ನಮ್ಮ ಆಡಳಿತ ವ್ಯವಸ್ಥೆ ಸರಿಮಾಡುವ, ಸರಳವನ್ನಾಗಿಸುವ ಕೆಲಸಕ್ಕೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ನೇತೃತ್ವ ನೀಡಬೇಕು.
ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026ರ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾವರನಮ್ಮ ಆಡಳಿತ ವ್ಯವಸ್ಥೆ ಸರಿಮಾಡುವ, ಸರಳವನ್ನಾಗಿಸುವ ಕೆಲಸಕ್ಕೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ನೇತೃತ್ವ ನೀಡಬೇಕು ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು. ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026ರ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಆಡಳಿತ ವ್ಯವಸ್ಥೆಯನ್ನು ಸರಿಮಾಡುವ ಕೆಲಸ ತುರ್ತಾಗಿ ಆಗಬೇಕಿದೆ. ಇದು ಮಠಾಧೀಶರಿಂದ ಮಾತ್ರ ಸಾಧ್ಯ. ಮಾರುತಿ ಗುರೂಜಿ ಅವರ ಬದ್ಧತೆ, ಆಸಕ್ತಿ ನಾನು ಹತ್ತಿರದಿಂದ ಬಲ್ಲೆ. ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಮಠಾಧೀಶರಿಗೆ ಮಾರುತಿ ಗುರೂಜಿ ನೇತೃತ್ವ ನೀಡಬೇಕು. ಆ ಬಗೆಗೆ ಮಾರುತಿ ಗುರೂಜಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು. ಆಡಳಿತ ಮತ್ತು ವಿರೋಧ ಪಕ್ಷಗಳು ಟೀಕೆ, ವಿರೋಧ ಮಾಡುವುದೊಂದೇ ರಾಜಕಾರಣವಲ್ಲ. ಪಕ್ಷಗಳ ಅಭಿಪ್ರಾಯ, ಆಶಯಗಳು ಬೇರೆ ಬೇರೆ ಆಗಿದ್ದರೂ ಗುರಿ ಒಂದೇ ಆಗಿರಬೇಕು. ಎಲ್ಲರ ಒಳಿತು ಬಯಸುವುದು ಪಕ್ಷಗಳ ಮುಖ್ಯ ಗುರಿಯಾಗಬೇಕು ಎಂದು ಹೇಳಿದರು. ಪಶ್ಚಮ ಘಟದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳಿಂದ ಬಯಲುಸೀಮೆಯ ಜನರು ಬದುಕು ಕಟ್ಟಿಕೊಂಡಿದ್ದಾರೆ. ಪಶ್ಚಿಮ ಘಟ್ಟ ನಾಶವಾದರೆ ನದಿ ಮೂಲಗಳು ಕೂಡಾ ನಾಶವಾಗಲಿದೆ. ನದಿಗಳ ಉಗಮ ಸ್ಥಾನವನ್ನು ರಕ್ಷಿಸದಿದ್ದರೆ ರಾಜ್ಯದ ಜನತೆ ಸಂಪೂರ್ಣವಾಗಿ ನಾಶವಾಗಲಿದ್ದಾರೆ. ಪಶ್ಚಿಮ ಘಟ್ಟಕ್ಕೆ ಯಾವುದೇ ಹಾನಿ ಸಂಭವಿಸಿದರೆ ರಾಜ್ಯದ ಪ್ರತಿಯೊಬ್ಬರ ಮೇಲಾಗುವ ಹಾನಿಯಾಗಿದೆ ಎಂದು ಎಚ್ಚರಿಸಿದರು. ನಾಡಿನ ಪ್ರಕೃತಿ, ಪರಂಪರೆ, ಸಂಸ್ಕೃತಿಯ ಉಳಿಯುವಿಗಾಗಿ ಕಟಿಬದ್ಧರಾಗಿ ನಿಂತಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಮಾರುತಿ ಗುರೂಜಿ ಮಲೆನಾಡು ಮತ್ತು ಬಯಲು ಸೀಮೆ ಜನರ ಆಶಾದಾಯಕ ಬೆಳಕಾಗಿದ್ದಾರೆ. ಅವರ ಜೊತೆ ನಾವೆಲ್ಲರೂ ಜೊತೆಯಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು. ನಾವು ನಮಗಾಗಿ ಬದುಕಿದರೆ ಸಣ್ಣ ಮಟ್ಟದ ಜೀವನವಾಗಲಿದೆ. ನಾವು ನಮಗಾಗಿ ಜೊತೆಗೆ ಇತರರಿಗಾಗಿ ಬದುಕಿದರೆ ನಮ್ಮದು ದೊಡ್ಡ ಮಟ್ಟದ ಜೀವನ ಆಗಲಿದೆ. ಮಾರುತಿ ಗುರೂಜಿ ಈ ನಾಡಿನ ಪ್ರಕೃತಿ ಸಂಪತ್ತು, ಸಂಸ್ಕೃತಿಯ ಪರಂಪರೆ ಉಳಿವಿಗಾಗಿ ಜೀವನ ನಡೆಸುವ ಮೂಲಕ ಅವರದ್ದು ಬಹುದೊಡ್ಡ ಬದುಕಾಗಿದೆ ಎಂದರು. ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಅಧ್ಯಕ್ಷತೆ ಮತ್ತು ಸಾನಿಧ್ಯ ವಹಿಸಿ ಉಪದೇಶ ನೀಡಿದರು. ಸಾಹಿತಿ ಸಿದ್ದು ಯಾಪಲಪರವಿ ಗದಗ ಉಪಸ್ಥಿತರಿದ್ದರು. ನೂರ್ ಅಹ್ಮದ್ ಸ್ವಾಗತಿಸಿದರು. ಶೈಲೇಶ್, ಭಾರತಿ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.