ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿ ಶೀಘ್ರದಲ್ಲಿಯೇ ಮುಗಿದು ಏಪ್ರಿಲ್ ೩೦ರ ಒಳಗೆ ಕಾಲುವೆಗಳಲ್ಲಿ ತಾತ್ಕಾಲಿಕವಾಗಿಯಾದರೂ ನೀರು ಹರಿಸುವಂತೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿ ಶೀಘ್ರದಲ್ಲಿಯೇ ಮುಗಿದು ಏಪ್ರಿಲ್ ೩೦ರ ಒಳಗೆ ಕಾಲುವೆಗಳಲ್ಲಿ ತಾತ್ಕಾಲಿಕವಾಗಿಯಾದರೂ ನೀರು ಹರಿಸುವಂತೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.ಚಿಕ್ಕಮಗಳೂರು ವ್ಯಾಪ್ತಿಗೆ ಬರುವ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಮತ್ತು ಹೆಗಡೆಹಳ್ಳಿ, ಹೆಬ್ಬೂರು ಗ್ರಾಮಗಳಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗಳನ್ನು ರೈತ ಮುಖಂಡರಾದ ಲವಕುಮಾರ್, ಮಂಜಣ್ಣ ನೇತೃತ್ವದಲ್ಲಿ ಗುರುವಾರ ವೀಕ್ಷಿಸಿ ಮಾತನಾಡಿದರು.
ಐದಾರು ವರ್ಷಗಳಿಂದ ಭದ್ರಾ ಮೇಲ್ಡಂಡೆ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿವೆ. ಇದು ರೈತ ಸಮುದಾಯದಲ್ಲಿ ಅಸಂತೋಷ ಉಂಟು ಮಾಡಿದೆ. ಯೋಜನಾ ಕಾಮಗಾರಿಗೆ ಸಂಬಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಸಾವಿರಾರು ರೈತರೊಂದಿಗೆ ಅಗಸ್ಟ್ ತಿಂಗಳಿನಲ್ಲಿ ಕಾಮಗಾರಿಯನ್ನು ವೀಕ್ಷಿಸಿದ ಸಂದರ್ಭದಲ್ಲಿ ರೈತರು ಮತ್ತು ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆಗ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡಿ ಯೋಜನೆಗೆ ಅಡ್ಡಿಯಾಗಿರುವ ಪ್ರಕರಣಗಳನ್ನು ಕೂಡಲೇ ಬಗೆಹರಿಸಲು ತಿಳಿಸಲಾಗಿತ್ತು.ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರು ಪ್ರಕರಣವನ್ನು ಲೋಕ ಅದಾಲತ್ಗೆ ವರ್ಗಾಯಿಸಿದರು. ಬಳಿಕ ಈ ಕಾಮಗಾರಿಗೆ ಅಡ್ಡಿ ಮಾಡುತ್ತಿದ್ದ ರೈತರನ್ನು ಕರೆಸಿ ಚರ್ಚೆ ಮಾಡಿದ ನಂತರ ಸಮಸ್ಯೆಯನ್ನು ಬಗೆಹರಿಸಲಾಗಿತ್ತು ಎಂದು ಚಂದ್ರಪ್ಪ ಹೇಳಿದರು.
ಹೆಗಡೆಹಳ್ಳಿ ಹತ್ತಿರ ಕೆನಾಲ್ನಲ್ಲಿ ಬಂಡೆ ಇರುವುದರಿಂದ ಅದನ್ನು ಸಿಡಿಸಿ ತೆರವುಗೊಳಿಸಲು ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸಿದರೂ ಅದು ಸಾಧ್ಯವಾಗಿಲ್ಲ. ತಂತ್ರಜ್ಞಾನ ಬಹಳ ಮುಂದುವರೆದಿರುವ ಈ ಸಂದರ್ಭದಲ್ಲಿ ಸೂಕ್ತ ಯಂತ್ರಗಳನ್ನು ಉಪಯೋಗಿಸಿ ೧೫ ದಿನದ ಒಳಗಾಗಿ ಬಂಡೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಸಿದ್ದೇನೆ. ಅಧಿಕಾರಿಗಳೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ. ನೆಲದಲ್ಲಿರುವ ಎಂಬತ್ತು ಅಡಿ ಹಾಸು ಬಂಡೆಯನ್ನು ತೆಗೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಏ.30 ರೊಳಗೆ ಇಲ್ಲಿಂದ ಗೋನೂರುವರೆಗೂ ನೀರು ಟ್ರಯಲ್ ಆಗಿ ಹರಿಯಬೇಕು. ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಪೇಮೆಂಟ್ ನೀಡಲಾಗಿದೆ ಎಂದರು.ಐದು ಜಿಲ್ಲೆಗಳಲ್ಲಿರುವ ರೈತರು ಭದ್ರಾ ಮೇಲ್ಡಂಡೆ ಯೋಜನೆಯಿಂದ ಅನುಕೂಲ ಪಡೆಯಲಿದ್ದಾರೆ. ಅವರಿಗೆ ನೆರವಾಗುವಂತೆ ನಾವು ಕೆಲಸ ಮಾಡಬೇಕಾಗಿದೆ. ಅಧಿಕಾರಿಗಳು ಈ ಯೋಜನೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಯೋಜನಾ ವ್ಯಾಪ್ತಿಯಲ್ಲಿ ಬರುವ ರೈತರು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಅಧಿಕಾರಿಗಳ ಮೇಲೆ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ತ್ವರಿತಗತಿಯಲ್ಲಿ ಕೆಲಸ ಆಗಬೇಕು. ಎಷ್ಟೆ ಸಮಸ್ಯೆಗಳಿದ್ದರೂ ಟ್ರಯಲ್ ಆಗಿ ನೀರು ಬಿಡುವ ಆಲೋಚನೆ ಮಾಡಿದ್ದೇವೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.ಪರಮೇಶಣ್ಣ, ಚಂದ್ರಪ್ಪ, ಜಗದೀಶ್, ಚಂದ್ರಶೇಖರ್, ನಂದಕುಮಾರ್, ನಾಗರಾಜ್, ವಸಂತಕುಮಾರ್, ರಾಜಣ್ಣ, ಪ್ರಭಾಕರ್, ರೈತ ಸಂಘದ ಮುಖಂಡರಾದ ನಾಗರಾಜ್, ಶಿವಕುಮಾರ್, ಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಹಳ್ಳಪ್ಪ, ರೈತರು ಹಾಜರಿದ್ದರು.