ಸಾರಾಂಶ
ಅಭಿನಂದನೆ ನಿಮಿತ್ತ ವಿದುಷಿ ಮಂಜರಿಚಂದ್ರ ಶಿಷ್ಯರಿಂದ ನೃತ್ಯ ಸಿಂಚನ, ಪ್ರೊ.ಶಂಕರ್ ಜಾದೂ ಜಗತ್ತು ವೀಡಿಯೋ ಪ್ರದರ್ಶನ, ‘ನನ್ನಪ್ಪ...’ ಪುತ್ರ ತೇಜಸ್ಚಿ ಶಂಕರ್ನಿಂದ ಮಾತು. ಪ್ರೊ.ಶಂಕರ್ ಒಡನಾಟ-ಸಂವಾದ, ಕಲಾವಿದ ವಿನಯ್ ಹೆಗಡೆ ಅವರಿಂದ ಕಾಸ್ಮಿಕ್ ಸ್ಪ್ಲಾಷ್ ‘ಗಾಳಿಯಲ್ಲಿ ಚಿತ್ತಾರ’ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.ಅವರು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಿಲಿಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. ಶಂಕರ್ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಕರ್ನಾಟಕ ಕರಾವಳಿಯ ಮೊಟ್ಟ ಮೊದಲ ಜಾದೂಗಾರ ಪ್ರೊ.ಶಂಕರ್ ಅವರಿಗೆ ಎಂದೋ ಅಭಿನಂದನೆ, ಸನ್ಮಾನ ಆಗಬೇಕಿತ್ತು. ಪ್ರಶಸ್ತಿ ಸನ್ಮಾನಗಳಿಂದ ದೂರವಿರುವ ಅವರು, ನಾಡಿನ ಅದ್ಭುತ ಜಾದೂಗಾರ ಎಂದು ಸಂತಸ ವ್ಯಕ್ತಪಡಿಸಿದರು.
ಇಂದ್ರಜಾಲ ಪ್ರವೀಣ ಓಂ ಗಣೇಶ್ ಉಪ್ಪುಂದ ಅಭಿನಂದನಾ ಮಾತುಗಳನ್ನಾಡಿ, ಒಂದು ಕಾಲದಲ್ಲಿ ರಾಜಾಶ್ರಯವಿದ್ದ ಜಾದೂ ಕಲೆಯೀಗ ಸಂವಹನ, ಸಂವೇದನೆ ಇಲ್ಲದ ಕಲೆಯಾಗಿದೆ. ಸರ್ಕಾರವೂ ಸಹ ಜಾದೂಗಾರರನ್ನು ಪ್ರಶಸ್ತಿಗೆ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದರು. ಪ್ರೊ.ಶಂಕರ್ ಸರಳ ಹಾಗೂ ಸಜ್ಜನಿಕೆಯ ವಿಚಾರದಲ್ಲಿ ಎಲ್ಲ ಕಲಾವಿದರಿಗೂ ಅವರು ಮಾದರಿ ಎಂದರು.ಪ್ರೊ.ಶಂಕರ್ ಅಭಿನಂದನಾ ಸಮಿತಿ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ.ರಾಮಕೃಷ್ಣ ಶಾಸ್ತ್ರಿ ರಚಿತ ‘ಪ್ರೊ.ಶಂಕರ್ ಜಾದೂ ಜರ್ನಿ’ ಪುಸ್ತಕವನ್ನು ನಾಡೋಜ ಪ್ರೊ.ಕೆ.ಪಿ.ರಾವ್ ಬಿಡುಗಡೆ ಮಾಡಿದರು. ಭುವನ ಪ್ರಸಾದ್ ಹೆಗ್ಡೆ, ವಿ.ಜಿ.ಶೆಟ್ಟಿ, ಪ್ರಕಾಶ್ ಕೊಡೆಂಕಿರಿ, ಮುರಲಿ ಕಡೆಕಾರ್ ವೇದಿಕೆಯಲ್ಲಿದ್ದರು
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮನೋವೈದ್ಯ ಡಾಕ್ಟರ್ ಪಿ.ವಿ. ಭಂಡಾರಿ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಪ.ರಾಮಕೃಷ್ಣ ಶಾಸ್ತ್ರಿ, ಲಕ್ಷ್ಮೀ ಶಂಕರ್ ಇದ್ದರು.ಪ್ರೊ.ಕೆ.ಸದಾಶಿವ ರಾವ್ ಸ್ವಾಗತಿಸಿದರು. ಸಮಿತಿ ಸಂಚಾಲಕ ರವಿರಾಜ್ ಎಚ್. ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.
ಅಭಿನಂದನೆ ನಿಮಿತ್ತ ವಿದುಷಿ ಮಂಜರಿಚಂದ್ರ ಶಿಷ್ಯರಿಂದ ನೃತ್ಯ ಸಿಂಚನ, ಪ್ರೊ.ಶಂಕರ್ ಜಾದೂ ಜಗತ್ತು ವೀಡಿಯೋ ಪ್ರದರ್ಶನ, ‘ನನ್ನಪ್ಪ...’ ಪುತ್ರ ತೇಜಸ್ಚಿ ಶಂಕರ್ನಿಂದ ಮಾತು. ಪ್ರೊ.ಶಂಕರ್ ಒಡನಾಟ-ಸಂವಾದ, ಕಲಾವಿದ ವಿನಯ್ ಹೆಗಡೆ ಅವರಿಂದ ಕಾಸ್ಮಿಕ್ ಸ್ಪ್ಲಾಷ್ ‘ಗಾಳಿಯಲ್ಲಿ ಚಿತ್ತಾರ’ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು. ಪ್ರೊ.ಶಂಕರ್ ಒಡನಾಟದಲ್ಲಿ ಮಣಿಪಾಲದ ಮೂಳೆ ತಜ್ಞ ಡಾ. ಕಿರಣ್ ಆಚಾರ್ಯ, ರಂಗಕರ್ಮಿ ಮೂರ್ತಿ ದೇರಾಜೆ, ರಾಜಯೋಗಿನಿ ಬಿ.ಕೆ. ಸೌರಭ ಮಾತನಾಡಿದರು. ಆಸ್ಟ್ರೊ ಮೋಹನ್ ಸಮನ್ವಯ ನಡೆಸಿದರು. ನಾರಾಯಣ ಹೆಗಡೆ ಹಾಗೂ ಡಾ.ಎಚ್.ಎನ್. ಉದಯ ಶಂಕರ್ ನಿರೂಪಿಸಿದರು.